ತೇಜಸ್ವಿಯನ್ನು ಸಿಎಂ ಮಾಡಿದರೆ, ನಿಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುತ್ತೇವೆ: ನಿತೀಶ್ ಗೆ ಆರ್ ಜೆಡಿ ಸಲಹೆ
ಪಾಟ್ನಾ : “ಬಿಹಾರದಲ್ಲಿ ಮಹಾಮೈತ್ರಿಕೂಟ ಸೇರಿ ತೇಜಸ್ವಿ ಯಾದವ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರಿಸಿ, ಇದಕ್ಕೆ ಪ್ರತಿಯಾಗಿ ಆರ್ ಜೆಡಿ ನಿಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವುದು’’ ಎಂದು ಆರ್ ಜೆಡಿ ಇಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಸಲಹೆ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ತನ್ನ ಏಳು ಶಾಸಕರ ಪೈಕಿ ಆರು ಮಂದಿಯನ್ನು ಸೆಳೆದಂದಿನಿಂದ ಜೆಡಿಯು ಅಸಮಾಧಾನ ಹೊಂದಿರುವುದರಿಂದ ಆರ್ಜೆಡಿ ಈ ಆಫರ್ ಮಾಡಿದೆ.
"ಆರ್ ಜೆಡಿ ಒಮ್ಮೆ ಅವರನ್ನು (ನಿತೀಶ್) ಸಿಎಂ ಮಾಡಿತ್ತು. ಈಗ ಅವರು ಉದಾರ ಹೃದಯಿಗಳಾಗಿ ತೇಜಸ್ವಿಗೆ ಸಿಎಂ ಆಗಲು ಅನುವು ಮಾಡಿಕೊಡಬೇಕು. ನಿತೀಶ್ ಅವರು ತಮ್ಮ ಗಮನವನ್ನು ದಿಲ್ಲಿಯತ್ತ ಕೇಂದ್ರೀಕರಿಸಬೇಕು ಹಾಗೂ ವಿಪಕ್ಷವನ್ನು ಮುನ್ನಡೆಸಬೇಕು'' ಎಂದು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಆರ್ ಜೆಡಿ ನಾಯಕ ಉದಯ್ ನಾರಾಯಣ್ ಚೌಧುರಿ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಅಜಿತ್ ಶರ್ಮ ಅವರು ನಿತೀಶ್ ಅವರಿಗೆ ಮಹಾಮೈತ್ರಿ ಕೂಟ ಸೇರುವಂತೆ ಆಹ್ವಾನ ನೀಡಿದ ಬೆನ್ನಿಗೆ ಆರ್ ಜೆಡಿ ಈ ಹೇಳಿಕೆ ಬಂದಿದೆ.