ಪಂಜಾಬ್ನಲ್ಲಿ ಮೊಬೈಲ್ ಟವರ್ಗೆ ಹಾನಿ ಪ್ರಕರಣ: ಮಧ್ಯಪ್ರವೇಶ ಕೋರಿ ಸಿಎಂಗೆ ಪತ್ರ ಬರೆದ ರಿಲಯನ್ಸ್ ಸಂಸ್ಥೆ
ಹೊಸದಿಲ್ಲಿ, ಡಿ.30: ಪಂಜಾಬ್ನಲ್ಲಿ ಜಿಯೊ ನೆಟ್ವರ್ಕ್ ಪ್ರದೇಶದಲ್ಲಿ ಮೊಬೈಲ್ ಟವರ್ಗೆ ಹಾನಿ ಎಸಗಿರುವ ಅಪರಿಚಿತ ಜನರ ವಿಧ್ವಂಸಕ ಕೃತ್ಯದ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ರಿಲಯನ್ಸ್ ಜಿಯೊ ಇನ್ಫೋಕಾಂ ಸಂಸ್ಥೆ ಪಂಜಾಬ್ ಮುಖ್ಯಮಂತ್ರಿ ಹಾಗೂ ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ.
ಸ್ಥಳೀಯ ಪೊಲೀಸರು ಇಂತಹ ವಿಧ್ವಂಸಕ ಕೃತ್ಯಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಅಥವಾ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸುತ್ತಿಲ್ಲ. ಆದ್ದರಿಂದ ಇಂತಹ ಘಟನೆಗಳು ತಡೆಯಿಲ್ಲದೆ ಮುಂದುವರಿದಿದೆ. ಕಳೆದ ಕೆಲವು ವಾರಗಳಿಂದ ಡಿಜಿಟಲ್ ಸೇವೆ ಒದಗಿಸುತ್ತಿರುವ ರಿಲಯನ್ಸ್ ಜಿಯೊ ಸಂಸ್ಥೆಯ ಮೂಲಸೌಕರ್ಯವನ್ನು ಹಾನಿಗೆಡವ ಮೂಲಕ ಹಿಂಸಾಚಾರಕ್ಕೆ ಉತ್ತೇಜನ ನೀಡುತ್ತಿರುವ ಪ್ರಕ್ರಿಯೆಯ ಬಗ್ಗೆ ಗೌರವಾನ್ವಿತರಾದ ತಮ್ಮ ಗಮನ ಸೆಳೆಯುತ್ತಿದ್ದೇವೆ. ಅಲ್ಲದೆ ಪಂಜಾಬ್ ಜನತೆಗೆ ಅಗತ್ಯದ ಸೇವೆ ಒದಗಿಸುತ್ತಿರುವ ಸಂಸ್ಥೆಯ ಸಿಬ್ಬಂದಿಗಳಿಗೆ ನಿರಾತಂಕವಾಗಿ ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ವಿನಂತಿಸಲಾಗಿದೆ. ಸೆಪ್ಟಂಬರ್ ಕೊನೆಯ ವಾರದಿಂದ ರಿಲಯನ್ಸ್ ಜಿಯೊ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದ್ದು ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಪಂಜಾಬ್ ಡಿಜಿಪಿಗೆ ಅಕ್ಟೋಬರ್ನಲ್ಲೇ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕರ್ಫ್ಯೂ, ಲಾಕ್ಡೌನ್ ಮುಂತಾದ ಕಷ್ಟದ ಸಂದರ್ಭದಲ್ಲೂ ನಿಮ್ಮ ಸಮರ್ಥ ನಾಯಕತ್ವದಿಂದ ಜಿಯೋ ತಂಡ ಪಂಜಾಬ್ ಜನತೆಗೆ ನಿರಂತರ ಡಿಜಿಟಲ್ ಸೇವೆ ಒದಗಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.