ಬಿಜೆಪಿಯನ್ನು ಸಂತೋಷಪಡಿಸಲು ಪ್ರಯತ್ನಿಸಿದ್ದಕ್ಕೆ ನನಗೆ ಸಿಕ್ಕಿದ್ದು 25-30 ಕೇಸ್ ಗಳು ಮಾತ್ರ: ಕಂಗನಾ ರಣಾವತ್
ಬಿಜೆಪಿಯ ಪಾಪಗಳನ್ನು ತೊಳೆದು ಮುಗಿಸಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್
ಮುಂಬೈ,ಜ.04: ಬಾಲಿವುಡ್ ನ ಖ್ಯಾತ ನಟಿಯರಾದ ಊರ್ಮಿಳಾ ಮಾತೋಂಡ್ಕರ್ ಹಾಗೂ ಕಂಗಣಾ ರಣಾವತ್ ರಾಜಕೀಯಕ್ಕೆ ಸೇರಿದ ಬಳಿಕ ಸಾಮಾಜಿಕ ತಾಣದ ಮೂಲಕ ಶೀತಲ ಸಮರ ನಡೆಯುತ್ತಲೇ ಇದೆ. ಶಿವಸೇನೆ ಪಕ್ಷವನ್ನು ಸೇರಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ಮೂರು ಕೋಟಿ ರೂ.ಯ ಹೊಸ ಮನೆಯನ್ನು ಖರೀದಿಸಿದ ಕುರಿತು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಂಗನಾ ಬಿಜೆಪಿ ಪಕ್ಷಕ್ಕೂ ಮೆಲ್ಲನೇ ತಿವಿದ ಘಟನೆ ನಡೆದಿದೆ. ಈ ಕುರಿತು hindustantimes.com ವರದಿ ಮಾಡಿದೆ.
ಮುಂಬೈನಲ್ಲಿ ಶಿವಸೇನೆ ಆಡಳಿತವಿದ್ದು, ಕಂಗನಾ "ಮುಂಬೈನಲ್ಲಿ ವಾಸಿಸಲು ಯಾರ ಅಪ್ಪಣೆಯ ಅವಶ್ಯಕತೆಯಿಲ್ಲ" ಎಂದು ಹೇಳಿಕೆ ನೀಡಿದ್ದರು. ಈ ವೇಳೆ ಶಿವಸೇನೆಗೆ ಸೇರಿದ್ದ ಊರ್ಮಿಳಾ, "ಈ ಯುವತಿಯರ ತಲೆಗೆ ತೀವ್ರ ಪೆಟ್ಟಾಗಿದೆ" ಎಂದು ಹೆಸರು ಉಲ್ಲೇಖಿಸದೇ ಕಂಗನಾರನ್ನು ಆಕ್ಷೇಪಿಸಿದ್ದರು.
ಇದರ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿದ ಕಂಗನಾ, "ಡಿಯರ್ ಊರ್ಮಿಳಾ ಮಾತೋಂಡ್ಕರ್ ಜೀ, ನಾನು ನನ್ನ ದುಡಿಮೆಯಿಂದ ಕಷ್ಟಪಟ್ಟು ನಿರ್ಮಿಸಿದ್ದ ಮನೆಯನ್ನು ಕಾಂಗ್ರೆಸ್ ಧ್ವಂಸ ಮಾಡಿತು. ಬಿಜೆಪಿಯನ್ನು ಸಂತೋಷಪಡಿಸುತ್ತಲೇ ನನಗೆ ಸಿಕ್ಕಿದ್ದು 25-30 ಕೇಸುಗಳು ಮಾತ್ರ. ನಾನು ನಿಮ್ಮಂತೆ ಚಾಣಾಕ್ಷೆಯಾಗಿದ್ದರೆ ಕಾಂಗ್ರೆಸ್ ಅನ್ನೇ ತೃಪ್ತಿಪಡಿಸುತ್ತಿದ್ದೆ. ನಾನೆಷ್ಟು ಮೂರ್ಖಳು ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಕಂಗನಾ ಹೇಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ಮುಂಬೈ ಮತ್ತು ಮಹಾರಾಷ್ಟ್ರವನ್ನು ಅವಮಾನ ಮಾಡುವಲ್ಲಿ ಬಿಜೆಪಿ ಪಕ್ಷದ ಪಾತ್ರ ಎಷ್ಟಿದೆ ಅನ್ನುವುದು ಈ ಹೇಳಿಕೆಯಿಂದ ತಿಳಿಯಬಹುದು. ಎಲ್ಲಾ ಅನ್ಯಾಯಗಳ ಹಿಂದೆ ಬಿಜೆಪಿಯ ಕೈವಾಡವಿದೆ. ಮಹಾರಾಷ್ಟ್ರದ ಜನತೆಯೊಂದಿಗೆ ಬಿಜೆಪಿ ಬಹಿರಂಗವಾಗಿ ಕ್ಷಮೆಯಾಚನೆ ನಡೆಸಿದರೂ ಕೂಡಾ ಅವರ ಪಾಪಗಳು ತೊಳೆದುಹೋಗಲು ಸಾಧ್ಯವಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Dear @UrmilaMatondkar ji maine jo khud ki mehnat se ghar banaye woh bhi Congress tod rahi hai, sach mein BJP ko khush karke mere haath sirf 25-30 cases he lage hain, kash main bhi aapki tarah samajhdar hoti toh Congress ko khush karti, kitni bevakoof hoon main, nahin? pic.twitter.com/AScsUSLTAA
— Kangana Ranaut (@KanganaTeam) January 3, 2021