ರೈತರೊಂದಿಗೆ ಪ್ರಧಾನಮಂತ್ರಿಯೇ ನೇರವಾಗಿ ಮಾತುಕತೆ ನಡೆಸಲಿ: ಹರ್ ಸಿಮ್ರಾತ್ ಕೌರ್
ಚಂಡಿಗಡ: ಪ್ರತಿಭಟನಾನಿರತ ರೈತರು ಹಾಗೂ ಕೇಂದ್ರ ಸಚಿವರ ನಡುವೆ ಏಳು ಸುತ್ತಿನ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನೇರವಾಗಿ ಪ್ರತಿಭಟನಾನಿರತ ರೈತರೊಂದಿಗೆ ಮಾತನಾಡಬೇಕು ಎಂದು ಮಾಜಿ ಕೇಂದ್ರ ಸಚಿವೆ ಹರ್ ಸಿಮ್ರಾತ್ ಕೌರ್ ಆಗ್ರಹಿಸಿದ್ದಾರೆ.
ಏಳು ಸುತ್ತಿನ ಮಾತುಕತೆಯ ಬಳಿಕ ಸಚಿವರಿಗೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲವಾದರೆ ಪ್ರಧಾನಿಯವರೇ ಪ್ರತಿಭಟನಾ ನಿರತ ರೈತರುಗಳೊಂದಿಗೆ ನೇರವಾಗಿ ಮಾತನಾಡಬೇಕು. ಪಂಜಾಬ್ ಬಿಜೆಪಿ ರೈತರ ಆಂದೋಲನಕ್ಕೆ ರಾಜಕೀಯ ಬಣ್ಣ ಬಳಿಯುವುದನ್ನು ನಿಲ್ಲಿಸಬೇಕು ಎಂದು ಕೌರ್ ತಿಳಿಸಿದರು.
"ರೈತರ ಬೇಡಿಕೆಗಳು ಕಿವುಡು ಕಿವಿಗೆ ಕೇಳಿಸದೆ ಇರುವಾಗ ಚಳಿಗಾಲದ ಸಮಯದಲ್ಲಿ ರೈತರು ರಾತ್ರಿಗಳನ್ನು ಬಯಲು ಪ್ರದೇಶದಲ್ಲಿ ಕಳೆಯುತ್ತಿರುವುದು ಅಸಾಮಾನ್ಯ ವಿಚಾರ. ರೈತರು ತಮ್ಮ ಬೇಡಿಕೆಗಾಗಿ ಆಗ್ರಹಿಸುತ್ತಾ ಕೇಂದ್ರ ಸರಕಾರದ ಮನೆ ಬಾಗಿಲಲ್ಲಿ ಸಾಯುತ್ತಿದ್ದಾರೆ. ದೇಶದ ಅನ್ನದಾತರ ಸಾವಿಗೆ ಕಾರಣೀಕರ್ತರು ಯಾರು'' ಎಂದು ಕೌರ್ ಪ್ರಶ್ನಿಸಿದರು.
.
Next Story