ಟ್ರಂಪ್ ಗೆ ನಿಷೇಧ ಹೇರಿದ ಟ್ವಿಟರ್: ಯಾರನ್ನೂ ಬ್ಯಾನ್ ಮಾಡಬಾರದು ಎಂದ ತೇಜಸ್ವಿ ಸೂರ್ಯ!
ಹೊಸದಿಲ್ಲಿ,ಜ.09: ಕ್ಯಾಪಿಟೊಲ್ ಹಿಲ್ನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟ್ಟರ್ ಖಾಯಂ ಆಗಿ ಸ್ಥಗಿತಗೊಳಿಸಿದ ಬೆನ್ನಲ್ಲಿ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್ ಒಂದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯವನ್ನೂ ಟ್ಯಾಗ್ ಮಾಡಿರುವ ಸೂರ್ಯ ಹೀಗೆ ಬರೆದಿದ್ದಾರೆ- "ಅನಿಯಂತ್ರಿತ ದೊಡ್ಡ ಟೆಕ್ ಕಂಪೆನಿಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಒಡ್ಡುತ್ತಿರುವ ಅಪಾಯವನ್ನು ಇನ್ನೂ ಅರ್ಥ ಮಾಡಿಕೊಳ್ಳದವರಿಗೆ ಇದು ಎಚ್ಚರಿಕೆಯ ಕರೆಗಂಟೆ. ಅವರು ಇದನ್ನು ಪೋಟಸ್ (ಅಮೆರಿಕಾ ಅಧ್ಯಕ್ಷ)ರಿಗೆ ಮಾಡುತ್ತಾರೆಂದರೆ ಇನ್ನು ಬೇರೆಯವರಿಗೂ ಮಾಡಬಹುದು. ಭಾರತ ಇಂಟರ್-ಮೀಡಿಯರಿ ರೆಗ್ಯುಲೇಶನ್ಗಳನ್ನು ಎಷ್ಟು ಬೇಗ ಪರಾಮರ್ಶಿಸುವುದೋ ಅಷ್ಟು ಅದು ನಮ್ಮ ಪ್ರಜಾಪ್ರಭುತ್ವಕ್ಕೆ ಉತ್ತಮವಾಗಿದೆ,." ಎಂದು ಸೂರ್ಯ ಬರೆದಿದ್ದಾರೆ.
ತಮ್ಮ ಪ್ರಚೋದನಾತ್ಮಕ ಹೇಳಿಕೆಗಳಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಬಿಜೆಪಿ ಯುವ ಮೋರ್ಚಾ ನಾಯಕನಿಂದಲೇ ಇಂತಹ ಟ್ವೀಟ್ ಬಂದಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆ ಪ್ರಚಾರ ಸಂದರ್ಭ ಮಾತನಾಡಿದ್ದ ಸೂರ್ಯ "ಓವೈಸಿ ಜಿನ್ನಾರ ಹೊಸ ಅವತಾರ ಅವರನ್ನು ನಾವು ಸೋಲಿಸಬೇಕು," ಎಂದು ಹೇಳಿ ವಿವಾದಕ್ಕಿಡಾಗಿದ್ದರು.