ಮುಂಬೈ: ನೌಕಾ ಪಡೆಯ ನಾವಿಕ ಶವವಾಗಿ ಪತ್ತೆ
ಮುಂಬೈ, ಜ. 10: ಭಾರತೀಯ ನೌಕಾ ಪಡೆಯ ನಾವಿಕನೋರ್ವರು ಯುದ್ಧ ನೌಕೆಯಲ್ಲಿ ಬುಲೆಟ್ನಿಂದ ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ನಾವಿಕನನ್ನು ರಮೇಶ್ ಚೌಧರಿ (22) ಎಂದು ಗುರುತಿಸಲಾಗಿದೆ.
ರಮೇಶ್ ಚೌಧರಿ ಅವರನ್ನು ಐಎನ್ಎಸ್ ಬೇಟ್ವಾದಲ್ಲಿ ನಿಯೋಜಿಸಲಾಗಿತ್ತು ಎಂದು ನೌಕಾ ಪಡೆ ವಕ್ತಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೇವಾ ರಿವಾಲ್ವರ್ ಮೃತದೇಹದ ಬಳಿ ಪತ್ತೆಯಾಗಿದೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಪರಿಶೀಲನೆ ನಂತರವಷ್ಟೇ ತಿಳಿಯಲಿದೆ ಎಂದು ಹೇಳಿಕೆ ತಿಳಿಸಿದೆ. ಐಎನ್ಎಸ್ ಬೇಟ್ವಾ ಕ್ಷಿಪಣಿ ಹೊಂದಿರುವ ಯುದ್ಧ ನೌಕೆ. ಪ್ರಸ್ತುತ ಈ ನೌಕೆ ಭಾರತೀಯ ನೌಕಾ ಪಡೆಯ ಸೇವೆಯಲ್ಲಿದೆ. ಜೋಧ್ಪುರ ನಿವಾಸಿಯಾಗಿರುವ ರಮೇಶ್ ಚೌಧರಿ ಅವಿವಾಹಿತರು. ಅವರು ರಜೆ ಮುಗಿಸಿ ಇತ್ತೀಚೆಗಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದರು. ಚೌಧರಿ ಅವರು ಪೋಷಕರು ಹಾಗೂ ತಂಗಿಯನ್ನು ಅಗಲಿದ್ದಾರೆ. ಪ್ರಕರಣವನ್ನು ನೌಕಾ ಪಡೆಯ ಅಧಿಕಾರಿಗಳೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.