ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಿ ಎಂದು ಜನರಿಗೆ ಹೇಳುವಷ್ಟು ʼಧೈರ್ಯʼ ನನಗಿಲ್ಲ: ಛತ್ತೀಸ್ ಗಢ ಆರೋಗ್ಯ ಸಚಿವ
ರಾಯಪುರ್,ಜ.11: ಭಾರತ್ ಬಯೋಟೆಕ್ ಸಂಸ್ಥೆಯ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಡಾಟಾ ಇನ್ನೂ ಪ್ರಕಟಿಸಲ್ಪಡದೇ ಇರುವುದರಿಂದ ಅದನ್ನು ತಮ್ಮ ರಾಜ್ಯದಲ್ಲಿ ಅನುಮತಿಸಬಾರದು ಎಂದು ಛತ್ತೀಸಗಢ ಆರೋಗ್ಯ ಸಚಿವ ಟಿ ಎಸ್ ಸಿಂಗ್ ದಿಯೋ ಹೇಳಿದ್ದಾರೆ. ಜನರಿಗೆ ಈ ಲಸಿಕೆ ತೆಗೆದುಕೊಳ್ಳಿ ಎಂದು ಹೇಳುವಷ್ಟು ʼಧೈರ್ಯʼ ತಮ್ಮಲ್ಲಿಲ್ಲ ಎಂದು ಸಚಿವರು ಹೇಳಿದ್ದಾರೆ.
ಆಕ್ಸ್ಫರ್ಡ್-ಆಸ್ಟ್ರಾ ಝೆನೆಕಾದ ಕೋವಿಶೀಲ್ಡ್ ಲಸಿಕೆಯೊಂದಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಅನುಮತಿ ನೀಡಿದ್ದರೂ ಕೊವಾಕ್ಸಿನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.
"ಕೋವ್ಯಾಕ್ಸಿನ್ನ ಸಂಪೂರ್ಣ ವರದಿ ಹೊರಬರುವ ತನಕ ಅದನ್ನು ಬಳಸಬಾರದು, ನನ್ನ ಅಭಿಪ್ರಾಯದಂತೆ ನಮ್ಮ ರಾಜ್ಯದಲ್ಲಿ ಅದಕ್ಕೆ ಅನುಮತಿಸಬಾರದು. ಈಗಿನ ಸನ್ನಿವೇಶದಲ್ಲಿ ಈ ಲಸಿಕೆ ತೆಗೆದುಕೊಳ್ಳಿ ಎಂದು ಜನರಿಗೆ ಹೇಳುವಷ್ಟು ಧೈರ್ಯ ನನಗಿಲ್ಲ." ಎಂದು ಅವರು ಹೇಳಿದ್ದಾರೆ.
ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ವೇಳೆ ಲಸಿಕೆ ಪಡೆದಿದ್ದ ಭೋಪಾಲ್ನ 42 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಕೋವ್ಯಾಕ್ಸಿನ್ ಕುರಿತಂತೆ ಇನ್ನಷ್ಟು ವಿವಾದ ಹುಟ್ಟಿಕೊಂಡಿದೆ.