ಆರೋಪಿಗಳ ಖುಲಾಸೆ ಪ್ರಶ್ನಿಸಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು 2 ವಾರ ಮುಂದೂಡಿದ ಹೈಕೋರ್ಟ್
ಬಾಬರಿ ಮಸೀದಿ ಧ್ವಂಸ ಪ್ರಕರಣ
ಲಕ್ನೋ, ಜ. 12: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಸಹಿತ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಎರಡು ವಾರಗಳ ಕಾಲ ಮುಂದೂಡಿದೆ. ಮನವಿಯಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ ನ್ಯಾಯಮೂರ್ತಿ ರಾಕೇಶ್ ಶ್ರೀವಾತ್ಸವ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠ ಮನವಿಯ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
ಅರ್ಜಿದಾರರು ಕೂಡ ತಮ್ಮ ಮನವಿಯಲ್ಲಿರುವ ಕೆಲವು ದೋಷಗಳನ್ನು ತೆಗೆದು ಹಾಕಲು ಸಮಯಾವಕಾಶ ಕೋರಿದ್ದರು.
ಎಲ್.ಕೆ. ಅಡ್ವಾಣಿ ಹಾಗೂ ಇತರ ಬಿಜೆಪಿ ನಾಯಕರು ಸೇರಿದಂತೆ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಅಯೋಧ್ಯೆಯ ಇಬ್ಬರು ನಿವಾಸಿಗಳಾದ ಹಾಜಿ ಮೆಹಬೂಬ್ (74) ಹಾಗೂ ಸಯ್ಯದ್ ಅಖ್ಲಾಕ್ ಅಹ್ಮದ್ (81) ಲಕ್ನೋ ನ್ಯಾಯ ಪೀಠಕ್ಕೆ ಶುಕ್ರವಾರ ಮರು ಪರಿಶೀಲನಾ ಮನವಿ ಸಲ್ಲಿಸಿದ್ದರು.
Next Story