ಭಾರತದ ವಿವಾದಾತ್ಮಕ ಕಾನೂನುಗಳ ವಿರುದ್ಧ ಬ್ರಿಟನ್ ನಲ್ಲಿ ಪ್ರತಿಭಟನೆ
ಸರ್ರೆ,ಜ.17: ಭಾರತ ಸರಕಾರದ ಕೆಲವು ವಿವಾದಾತ್ಮಕ ಕಾನೂನುಗಳನ್ನು ವಿರೋಧಿಸಿ ಬ್ರಿಟನ್ನ ಸರ್ರೆ ನಗರದಲ್ಲಿ ಶನಿವಾರ ಇಂಡಿಯನ್ಸ್ ಎಬ್ರಾಡ್ ಫಾರ್ ಪ್ಲೂರಲಿಸ್ಟ್ ಇಂಡಿಯಾ (ಬಹುತ್ವವಾದಿ ಭಾರತಕ್ಕಾಗಿ ಭಾರತೀಯರು- ಐಎಪಿಐ) ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಮೆರಿಕದ ಮಾನವಹಕ್ಕುಗಳ ಚಳವಳಿಯ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ 92ನೇ ಜನ್ಮದಿನಾಚರಣೆಯ ಅಂಗವಾಗಿ ಸರ್ರೆಯಲ್ಲಿರುವ ಭಾರತೀಯ ವೀಸಾ ಹಾಗೂ ಪಾಸ್ಪೋರ್ಟ್ ಕಚೇರಿಯ ಹೊರಗೆ ಈ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು.
ಭಾರತ ಸರಕಾರದ ವಿವಾದಾತ್ಮಕ ನೂತನ ಕೃಷಿ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕರಾಳವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಪ್ರತಿಗಳನ್ನು ಕಾರ್ಯಕರ್ತರು ಸುಟ್ಟುಹಾಕಿದರು ಹಾಗೂ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಐಎಪಿಐ ಅಧ್ಯಕ್ಷ ಪಾರ್ಶೋತ್ತಮ್ ದೋಸಾಂಜ್, ಸಂಘಟಕ ರಾಕೇಶ್ ಕುಮಾರ್, ಖಜಾಂಚಿ ನವತೇಜ್ ಜೋಹಾಲ್ ಹಾಗೂ ಕಾರ್ಯಕರ್ತರಾದ ತೇಜಿಂದರ್ ಶರ್ಮಾ ಹಾಗೂ ಗುರುಪ್ರೀತ್ ಸಿಂಗ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.