ತಾಂಡವ್ ವಿವಾದ: ಸೈಫ್ ಅಲಿ ಖಾನ್, ಅಮೆಝಾನ್ ಕಚೇರಿಗಳ ಭದ್ರತೆ ಹೆಚ್ಚಳ
ಧಾರಾವಾಹಿ ನಿರ್ಮಾಪಕರಿಂದ ಬೇಷರತ್ ಕ್ಷಮೆಯಾಚನೆ
ಹೊಸದಿಲ್ಲಿ: ಅಮೆಝಾನ್ ಪ್ರೈಮ್ ವೀಡಿಯೊದಲ್ಲಿ ಪ್ರಸಾರವಾಗಿರುವ ತಾಂಡವ್ ವೆಬ್ ಧಾರಾವಾಹಿಯ ನಿರ್ಮಾಪಕರು, ಕೆಲವು ದೃಶ್ಯಗಳಲ್ಲಿ ಸಾರ್ವಜನಿಕರ ಭಾವನೆಗಳನ್ನು ಯಾವುದೇ ಉದ್ದೇಶವಿಲ್ಲದೆ ನೋಯಿಸಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇಂದು ಬೆಳಗ್ಗೆ ಉತ್ತರಪ್ರದೇಶದ ಲಕ್ನೋದ ಹಝ್ರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಧಾರಾವಾಹಿಯ ನಿರ್ಮಾಪಕರು ಹಾಗೂ ಅಮೆಝಾನ್ ಇಂಡಿಯಾ ಮುಖ್ಯಸ್ಥರ ವಿರುದ್ಧ ಎಫ್ ಐಆರ್ ದಾಖಲಾದ ಬಳಿಕ ಈ ಬೆಳವಣಿಗೆ ನಡೆದಿದೆ.
ತಾಂಡವ್ ಧಾರಾವಾಹಿ ವಿವಾದವಾದ ಕಾರಣ ಸೈಫ್ ಅಲಿ ಖಾನ್ ಅವರ ಬಾಂದ್ರಾದಲ್ಲಿರುವ ಕಚೇರಿಯ ಹೊರ ಭಾಗ ಹಾಗೂ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಅಮೆಝಾನ್ ನ ಮುಖ್ಯ ಕಚೇರಿಗಳ ಹೊರಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸೋಮವಾರ ಪಿಟಿಐ ವರದಿ ಮಾಡಿದೆ.
ರವಿವಾರ ಬಿಜೆಪಿ ಶಾಸಕ ರಾಮ್ ಕದಂ ಮುಂಬೈನ ಘಾಟ್ ಕೋಪರ್ ಪೊಲೀಸ್ ಠಾಣೆಯಲ್ಲಿ ತಾಂಡವ್ ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದರು. ಇದಕ್ಕೂ ಮೊದಲು ಅಮೆಝಾನ್ ಇಂಡಿಯಾ ಒರಿಜಿನಲ್ ಕಂಟೆಂಟ್ ಹೆಡ್ ಅಪರ್ಣಾ ಪುರೋಹಿತ್, ಧಾರಾವಾಹಿಯ ನಿರ್ದೇಶಕ ಅಲಿ ಅಬ್ಬಾಸ್ ಝಾಫರ್, ನಿರ್ಮಾಪಕ ಹಿಮಾಂಶು ಮೆಹ್ರಾ, ಸಂಭಾಷಣೆಗಾರ ಗೌರವ್ ಸೋಳಂಕಿ ಹಾಗೂ ಇತರರ ವಿರುದ್ಧ ಲಕ್ನೊದ ಹಝ್ರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು.