ನ್ಯಾಯಾಂಗ, ಸಿಬಿಐ, ಈಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು: ಹೈಕೋರ್ಟ್
ಮುಂಬೈ, ಜ. 21: ನ್ಯಾಯಾಂಗ, ಆರ್ಬಿಐ, ಸಿಬಿಐ ಹಾಗೂ ಈಡಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ.
2016ರ ಭೂ ಅತಿಕ್ರಮಣದ ಆರೋಪಕ್ಕೆ ಒಳಗಾಗಿರುವ ಎನ್ಸಿಪಿ ನಾಯಕ ಏಕಾಂತ ಖಾಡ್ಸೆ ವಿರುದ್ಧದ ಬಲವಂತದ ಕ್ರಮಗಳಿಂದ ಮಧ್ಯಂತರ ರಕ್ಷಣೆ ನೀಡಿದರೆ ಸ್ವರ್ಗ ಕೆಳಗೆ ಬೀಳುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿದ ವರದಿಯನ್ನು ರದ್ದುಗೊಳಿಸುವಂತೆ ಕೋರಿ ಖಾಡ್ಸೆ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಹಾಗೂ ಮನೀಶ್ ಪಿಟಾಲಾ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆಗೆ ಬಾಕಿ ಇರುವುದರಿಂದ ಪ್ರಕರಣಕ್ಕೆ ಸಂಬಂಧಿಸಿ ಖಾಡ್ಸೆ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಮಧ್ಯಂತರ ರಕ್ಷಣೆ ನೀಡುವಂತೆ ಖಾಡ್ಸೆ ಅವರ ವಕೀಲ ಆಬಾದ್ ಪೋಂಡಾ ಮನವಿ ಮಾಡಿದರು.
ಸೋಮವಾರದ ವರೆಗೆ ಈ.ಡಿ. ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಈ.ಡಿ. ವಕೀಲ ಅನಿಲ್ ಸಿಂಗ್ ತಿಳಿಸಿದರು.