ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಯೋಗೇಂದ್ರ ಯಾದವ್ ಸಹಿತ 10 ರೈತ ನಾಯಕರ ವಿರುದ್ಧ ಎಫ್ಐಆರ್
ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಟ್ರಾಕ್ಟರ್ ರ್ಯಾಲಿಯ ವೇಳೆ ನಡೆದಿರುವ ರೈತರ ಪ್ರತಿಭಟನೆ ಹಾಗೂ ಬಳಿಕ ನಡೆದಿರುವ ಘಟನೆಗೆ ಸಂಬಂಧಿಸಿ ಯೋಗೇಂದ್ರ ಯಾದವ್ ಹಾಗೂ ರಾಕೇಶ್ ಟಿಕಾಯತ್ ಸಹಿತ ಕನಿಷ್ಠ 10 ರೈತ ನಾಯಕರ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಗಲಭೆ, ಕ್ರಿಮಿನಲ್ ಪಿತೂರಿ, ದರೋಡೆ, ಕೊಲೆಯತ್ನ ಹಾಗೂ ಇತರ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು 10 ಜಿಲ್ಲೆಗಳಲ್ಲಿ 22 ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮುಂದಿನ ದಿನಗಳಲ್ಲಿ ರೈತ ನಾಯಕರುಗಳನ್ನು ವಿಚಾರಣೆಗೆ ಕರೆಸಲಿದ್ದಾರೆ. ನಾವು ಈಗಾಗಲೇ ಸುಮಾರು 200 ಪ್ರತಿಭಟನಾಕಾರರನ್ನು ಗಲಭೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಿಯಾಗಿ ಪರಿಶೀಲನೆ ನಡೆಸಿದ ಬಳಿಕ ಬಂಧಿಸಿದ್ದೇವೆ. ಕೆಂಪುಕೋಟೆ, ಐಟಿಒ, ನಾಂಗೋಲಿ ಹಾಗೂ ಹಿಂಸಾಚಾರ ಉಂಟಾಗಿರುವ ಇತರ ಪ್ರದೇಶಗಳಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.