ರೈತರ ಪ್ರತಿಭಟನೆಯಿಂದ ಹೊರ ನಡೆದ ಎರಡು ರೈತ ಸಂಘಟನೆಗಳು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜ.27: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಮಂಗಳವಾರ ದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಸಂಭವಿಸಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಎರಡು ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿವೆ. ಮಂಗಳವಾರದ ಘಟನಾವಳಿಗಳಲ್ಲಿ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದು, 22 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸರು ಬುಧವಾರ ತಿಳಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ನಾಯಕ ವಿ.ಎಂ.ಸಿಂಗ್ ಅವರು, ‘ವಿಭಿನ್ನ ನಿರ್ದೇಶನವನ್ನು ಹೊಂದಿರುವವರೊಂದಿಗೆ ಪ್ರತಿಭಟನೆಯನ್ನು ನಡೆಸಲು ನಮ್ಮಿಂದ ಸಾಧ್ಯವಿಲ್ಲ ಮತ್ತು ನಮ್ಮ ಸಂಘಟನೆಯು ಈ ಪ್ರತಿಭಟನೆಯಿಂದ ತಕ್ಷಣವೇ ಹಿಂದಕ್ಕೆ ಸರಿಯುತ್ತದೆ ’ ಎಂದು ಹೇಳಿದರೆ,‘ದಿಲ್ಲಿಯಲ್ಲಿ ಮಂಗಳವಾರ ನಡೆದ ಘಟನೆಗಳಿಂದ ನನಗೆ ತೀವ್ರ ನೋವುಂಟಾಗಿದೆ ಮತ್ತು ನಾವು ನಮ್ಮ 58 ದಿನಗಳ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿದ್ದೇವೆ ’ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅಧ್ಯಕ್ಷ ಠಾಕೂರ್ ಭಾನುಪ್ರತಾಪ ಸಿಂಗ್ ತಿಳಿಸಿದರು. ಬಿಕೆಯು ಪ್ರತಿಭಟನೆ ನಡೆಸುತ್ತಿದ್ದ ದಿಲ್ಲಿಯ ಚಿಲ್ಲಾ ಗಡಿಯಿಂದ ರೈತರು ತಮ್ಮ ಗ್ರಾಮಗಳಿಗೆ ವಾಪಸಾಗುತ್ತಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಮಧ್ಯಾಹ್ನ ಸಿಂಘು ಗಡಿಯಲ್ಲಿ ಸಭೆ ನಡೆಸಿದ್ದು, ‘ಮಂಗಳವಾರದ ಹಿಂಸಾಚಾರಗಳ ಹಿಂದೆ ಷಡ್ಯಂತ್ರವಿದೆ ಮತ್ತು ಹಿಂಸಾಚಾರಗಳಿಗೂ ನಮಗೂ ಸಂಬಂಧವಿಲ್ಲ ’ಎಂದು ಪುನರುಚ್ಚರಿಸಿದೆ. ಕೆಂಪುಕೋಟೆಯಲ್ಲಿ ಕೆಟ್ಟ ಕೆಲಸಗಳನ್ನು ಮಾಡಿದವರು ಸರ್ದಾರ್ಗಳಲ್ಲ,ಅವರು ಗದ್ದಾರ್ (ದ್ರೋಹಿ)ಗಳು ಎಂದು ರೈತನಾಯಕರೋರ್ವರು ಹೇಳಿದರು.
ಪಂಜಾಬಿ ನಟ ಮತ್ತು ಹೋರಾಟಗಾರ ದೀಪ್ ಸಿಧು ಅವರು ಘರ್ಷಣೆಗಳನ್ನು ಮತ್ತು ಕೆಂಪುಕೋಟೆಯಲ್ಲಿ ಸಿಕ್ ಧಾರ್ಮಿಕ ಧ್ವಜಾರೋಹಣವನ್ನು ಪ್ರಚೋದಿಸಿದ್ದರು ಎಂದು ಒಂದು ವರ್ಗದ ರೈತನಾಯಕರು ಆರೋಪಿಸಿದ್ದಾರೆ. ದೀಪ್ ಸಿಧು ಸರಕಾರದ ವ್ಯಕ್ತಿಯಾಗಿದ್ದಾರೆ. ನಾವು ಈ ಒಳಸಂಚನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಈ ಜನರು ಕೆಂಪುಕೋಟೆಯನ್ನು ಹೇಗೆ ತಲುಪಿದ್ದರು ಮತ್ತು ಪೊಲೀಸರೇಕೆ ಅವರಿಗೆ ಅವಕಾಶ ನೀಡಿದ್ದರು ಎಂದು ರೈತ ನಾಯಕರೋರ್ವರು ಪ್ರಶ್ನಿಸಿದರು.
ತನ್ಮಧ್ಯೆ ಮಂಗಳವಾರ ಹಿಂಸಾಚಾರ ಭುಗಿಲೆದ್ದಿದ್ದ ದಿಲ್ಲಿಯ ಐಟಿಒ ಬಳಿ ಮೃತಪಟ್ಟಿದ್ದ ರೈತನ ಸಾವು ಗುಂಡೇಟಿನಿಂದ ಸಂಭವಿಸಿಲ್ಲ, ಗಾಯಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯು ತಿಳಿಸಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಕಂಡು ಬಂದಿರುವಂತೆ ತನ್ನ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಅವರಿಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಬರೇಲಿಯ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಚಂದ್ರ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ರೈತರನ್ನು ಬಗ್ಗುಬಡಿಯಲು ಮೋದಿ ಸರಕಾರವು ಹಲವು ರೀತಿಗಳಲ್ಲಿ ಪ್ರಯತ್ನಿಸಿದೆ. ಮೊದಲನೆಯದು ವಿಫಲ ಮಾತುಕತೆಗಳನ್ನು ನಡೆಸುವುದು. ಎರಡನೆಯದು ರೈತರಲ್ಲಿ ಒಡಕು ಮೂಡಿಸುವುದು ಮತ್ತು ಆಂದೋಲನಕ್ಕೆ ಅಂತ್ಯ ಹಾಡುವುದು,ರೈತರನ್ನು ಮತ್ತು ಕೃಷಿಕಾರ್ಮಿಕರನ್ನು ಅರಾಜಕತಾವಾದಿಗಳೆಂದು ಘೋಷಿಸುವುದು ಮತ್ತು ಅವರನ್ನು ಹೊರಕ್ಕೆ ತಳ್ಳುವುದು. ಅದರೆ ಈಗ ಇದರ ಬಣ್ಣ ಬಯಲಾಗುತ್ತಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು,ಗುಪ್ತಚರ ವರದಿಗಳು ಮತ್ತು ಕೆಂಪುಕೋಟೆಯನ್ನು ಪ್ರವೇಶಿಸುವ ರೈತರ ಉದ್ದೇಶದ ಬಗ್ಗೆ ಗೃಹಸಚಿವ ಅಮಿತ್ ಶಾ ಅವರಿಗೆ ಗೊತ್ತಿರಲಿಲ್ಲವೇ? ಪೊಲೀಸರೇಕೆ ಮೂಕ ಪ್ರೇಕ್ಷಕರಾಗಿದ್ದರು ಎಂದು ಪ್ರಶ್ನಿಸಿದರು. ಶಾ ಆಂದೋಲನಕ್ಕೆ ಕಳಂಕ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ ಸುರ್ಜೆವಾಲಾ,ಅವರ ರಾಜೀನಾಮೆಗೆ ಆಗ್ರಹಿಸಿದರು.