ಅರ್ನಬ್ ಗೋಸ್ವಾಮಿಯನ್ನು ತುರ್ತಾಗಿ ಬಂಧಿಸಿ, ವಿಚಾರಣೆಗೊಳಪಡಿಸಿ: ಪ್ರಕರಣ ದಾಖಲಿಸಿದ ಕಾಂಗ್ರೆಸ್ ಪಕ್ಷ
ಮುಂಬೈ,ಜ.28: ರಿಪಬ್ಲಿಕ್ ಮೀಡಿಯಾದ ಪ್ರಧಾನ ಸಂಪಾದಕರಾಗಿರುವ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವೆ ನಡೆದಿರುವ ವಾಟ್ಸ್ಯಾಪ್ ಚಾಟ್ ನಲ್ಲಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಕುರಿತ ಮಾಹಿತಿಯ ಕುರಿತಾದಂತೆ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಲಿಖಿತ ಪ್ರಕರಣವನ್ನು ದಾಖಲಿಸಿದೆ ಎಂದು ತಿಳಿದು ಬಂದಿದೆ.
ಮುಂಬೈನ ಕಂಡಿವಲ್ಲಿ ಸಮೀಪವಿರುವ ಸಮತಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೊಂದು ಪ್ರಕರಣವನ್ನು ಬಾಂದ್ರಾ ಈಸ್ಟ್ ನಲ್ಲಿರುವ ನಿರ್ಮಲನಗರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು indianexpress.com ವರದಿ ತಿಳಿಸಿದೆ.
"ಅರ್ನಬ್ ಗೋಸ್ವಾಮಿಗೆ ಬಾಲಾಕೋಟ್ ಏರ್ ಸ್ಟ್ರೈಕ್ ಕುರಿತು ಯಾರು ಮಾಹಿತಿ ನೀಡಿದ್ದಾರೆ ಅನ್ನುವುದರ ಕುರಿತು ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು. ಅರ್ನಬ್ ಗೋಸ್ವಾಮಿಯನ್ನು ತುರ್ತಾಗಿ ಬಂಧಿಸುವಂತೆ ಮತ್ತು ವಿಚಾರಣೆಗೊಳಪಡಿಸುವಂತೆ ಆಗ್ರಹಿಸಿ ನಾವು ಸಮತಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಚಿನ್ ಸಾವಂತ್ ಹೇಳಿಕೆ ನೀಡಿದ್ದಾರೆ.