10 ಲಕ್ಷ ರೂ. ಬಾಂಡ್ ಸಲ್ಲಿಸುವಂತೆ ರೈತರಿಗೆ ನೋಟಿಸ್: ಉತ್ತರಪ್ರದೇಶ ಸರಕಾರದಿಂದ ವಿವರಣೆ ಕೋರಿದ ಹೈಕೋರ್ಟ್
ಲಕ್ನೋ, ಜ. 27: ಉತ್ತರಪ್ರದೇಶದ ಜಿಲ್ಲೆಯ ಬಡ ರೈತರಿಗೆ ‘ಶಾಂತಿ ಉಲ್ಲಂಘನೆ’ಯ ನೋಟಿಸುಗಳನ್ನು ಜಾರಿ ಮಾಡಿರುವ ಬಗ್ಗೆ ಫೆಬ್ರವರಿ 2ರ ಒಳಗೆ ವಿವರಣೆ ನೀಡುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.
ರೈತರು ಕಾನೂನು ಸುವ್ಯವಸ್ಥೆ ಉಲ್ಲಂಘಿಸುವ ಆತಂಕದ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಗಿಂತ ಕೆಲವು ದಿನಗಳಿಗಿಂತ ಮುನ್ನ ಉತ್ತರಪ್ರದೇಶ ಸರಕಾರ ಸೀತಾಪುರ ಜಿಲ್ಲೆಯ ರೈತರಿಗೆ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ಬಾಂಡ್ ಸಲ್ಲಿಸುವಂತೆ ಸೂಚಿಸಿ ನೋಟಿಸು ಜಾರಿ ಮಾಡಿತ್ತು. ಲಕ್ನೋದಿಂದ 80 ಕಿ.ಮೀ. ವ್ಯಾಪ್ತಿಯ ಒಳಗಿರುವ ಸಿತಾಪುರ ಜಿಲ್ಲೆಯ ಟ್ರಾಕ್ಟರ್ ಹೊಂದಿರುವ ರೈತರಿಗೆ ಜನವರಿ 19ರಂದು ನೋಟಿಸು ಜಾರಿ ಮಾಡಲಾಗಿತ್ತು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಉಲ್ಲಂಘನೆಯಾಗುವ ಆತಂಕದಿಂದ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಶ್ಯೂರಿಟಿಯನ್ನು ಸಲ್ಲಿಸುವಂತೆ ರಾಜ್ಯ ಸರಕಾರ ರೈತರಿಗೆ ನೋಟಿಸು ಜಾರಿ ಮಾಡಿತ್ತು. ಸೀತಾಪುರದ ನೂರಾರು ರೈತರಿಗೆ ನೋಟಿಸು ಜಾರಿ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಆರುಂಧತಿ ಧುರು ಅವರು ಸಲ್ಲಿಸಿದ ಮನವಿಯನ್ನು ಉಚ್ಚ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರಕಾರದ ಅಧಿಕಾರಿಗಳು ಜಾರಿಗೊಳಿಸಿದ ನೋಟಿಸು ಆಧಾರವಿಲ್ಲದ್ದು. ಅಲ್ಲದೆ, ರೈತರು ಮನೆಯಿಂದ ಹೊರಬರದಂತೆ ಪೊಲೀಸರು ಅವರ ಮನೆಗಳನ್ನು ಸುತ್ತುವರಿದಿರುವುದರಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಇಬ್ಬರು ಸದಸ್ಯರನ್ನು ಒಳಗೊಂಡ ಅಲಹಾಬಾದ್ ಹೈಕೋರ್ಟ್ ಹೇಳಿದೆ.