ಪಂಜಾಬ್: 40 ಗೋದಾಮುಗಳಿಗೆ ಸಿಬಿಐ ದಾಳಿ; ಅಕ್ಕಿ, ಗೋಧಿ ಮುಟ್ಟುಗೋಲು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜ.29: ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ನಡುವೆ ಪಂಜಾಬ್ ನ ಸುಮಾರು 40 ಗೋದಾಮುಗಳಿಗೆ ಸಿಬಿಐ ದಾಳಿ ನಡೆಸಿ, ಅಕ್ಕಿ ಮತ್ತು ಗೋಧಿ ದಾಸ್ತಾನುಗಳ ಮಾದರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.
ಅರೆಸೇನಾ ಪಡೆಗಳ ಸಹಾಯದಿಂದ ಗುರುವಾರ ರಾತ್ರಿ ಸಿಬಿಐ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ.
ಪಂಜಾಬ್ ಗ್ರೈನ್ಸ್ ಪ್ರೊಕ್ಯೂರ್ಮೆಂಟ್ ಕಾರ್ಪೋರೇಷನ್(ಪಿಯುಎನ್ ಜಿಆರ್ ಐಎನ್), ಪಂಜಾಬ್ ವೇರ್ ಹೌಸಿಂಗ್ ಮತ್ತು ಭಾರತ ಆಹಾರ ನಿಗಮ(ಎಫ್ ಸಿ ಐ)ದ ಕೆಲವೊಂದು ಗೋದಾಮುಗಳಿಗೆ ಸಿಬಿಐ ದಾಳಿ ನಡೆಸಿದೆ. ಯಾವ್ಯಾವ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎನ್ನುವುದರ ಕುರಿತು ಸಮರ್ಪಕ ಮಾಹಿತಿ ದೊರಕಿಲ್ಲ. 2019-20 ಮತ್ತು 2020-21 ರ ಅಕ್ಕಿ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪಿಯೂಶ್ ಗೋಯಲ್, "ಸರಕಾರವು ಶೀಘ್ರದಲ್ಲೇ ಅಕ್ಕಿ,ಗೋಧಿ ದಾಸ್ತಾನುಗಳ ಗುಣಮಟ್ಟ ಪರೀಕ್ಷೆ ನಡೆಸಲಿದೆ ಎಂದು ಹೇಳಿಕೆ ಕೊಟ್ಟಿದ್ದರು. ಗಣರಾಜ್ಯೋತ್ಸವ ದಿನದಂದು ರೈತರ ಮತ್ತು ಕೇಂದ್ರ ಸರಕಾರದ ನಡುವೆ ನಡೆದ ಘರ್ಷಣೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.