ಭಾರತ ಸರಕಾರ- ಬ್ರಿಟನ್ ಸಂಸ್ಥೆಯ ವ್ಯಾಜ್ಯ: ಅಂತರ್ ರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತಕ್ಕೆ ಹಿನ್ನಡೆ
ಬ್ರಿಟನ್ ಸಂಸ್ಥೆಗೆ 1.4 ಬಿಲಿಯನ್ ಡಾಲರ್ ಪಾವತಿಗೆ ಸೂಚನೆ
ಹೊಸದಿಲ್ಲಿ, ಜ.31: ಭಾರತ ಸರಕಾರ ಮತ್ತು ಬ್ರಿಟನ್ ಸಂಸ್ಥೆ ಕೈರ್ನ್ ಎನರ್ಜಿ ನಡುವಿನ ವ್ಯಾಜ್ಯದ ಬಗ್ಗೆ ಅಂತರ್ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ತೀರ್ಪು ಭಾರತದ ವಿರುದ್ಧವಾಗಿರುವುದರಿಂದ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತ ಈಗ ಭಾರೀ ಮೊತ್ತವನ್ನು ಕೈರ್ನ್ಸ್ ಸಂಸ್ಥೆಗೆ ಪಾವತಿಸುವ ಅನಿವಾರ್ಯತೆಗೆ ಸಿಲುಕಿದೆ.
ಕೈರ್ನ್ಸ್ ಸಂಸ್ಥೆಗೆ 1.4 ಬಿಲಿಯನ್ ಡಾಲರ್ ಪಾವತಿಸುವಂತೆ ಅಂತರ್ ರಾಷ್ಟ್ರೀಯ ನ್ಯಾಯಮಂಡಳಿ ಆದೇಶಿಸಿದ್ದು ಆದೇಶ ಪಾಲಿಸುವ ಮೂಲಕ ಮುಜುಗರ ತಪ್ಪಿಸಿಕೊಳ್ಳಲು ಭಾರತಕ್ಕೆ ಈಗ ಎರಡು ಆಯ್ಕೆಗಳಿವೆ. ಹಲವು ಕಾರಣಗಳಿಂದ ನಿರ್ವಾಹಕರು ಸರಕಾರದ ಸುಪರ್ದಿಗೆ ಒಪ್ಪಿಸಿರುವ ಕೆಲವು ತೈಲ ಮತ್ತು ಅನಿಲ ಕ್ಷೇತ್ರಗಳನ್ನು ಕೈರ್ನ್ಸ್ ಸಂಸ್ಥೆಗೆ ನೀಡುವುದು ಮೊದಲ ಆಯ್ಕೆಯಾಗಿದ್ದರೆ, ರಾಜಸ್ಥಾನದಲ್ಲಿರುವ ಬರ್ಮಾರ್ ತೈಲ ನಿಕ್ಷೇಪವನ್ನು ಕೈರ್ನ್ ಸಂಸ್ಥೆಗೆ ನೀಡುವುದು ಎರಡನೇ ಆಯ್ಕೆಯಾಗಿದೆ ಎಂದು ಮೂಲಗಳು ಹೇಳಿವೆ.
ಕೈರ್ನ್ಸ್ ಸಂಸ್ಥೆಗೆ ಭಾರತದಲ್ಲಿ ತೈಲ ನಿಕ್ಷೇಪಗಳಿಂದ ತೈಲ ಆವಿಷ್ಕರಿಸುವ ಗುತ್ತಿಗೆಯನ್ನು ಸರಕಾರ ನೀಡಿತ್ತು. ಆದರೆ2014ರಲ್ಲಿ ಸಂಸ್ಥೆಗಳ ಮೇಲೆ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸುವ ಶಾಸನವನ್ನು ಬಳಸಿಕೊಂಡು ಕೇಂದ್ರ ಸರಕಾರ ಕೈರ್ನ್ ಎನರ್ಜಿ ಸಂಸ್ಥೆಗೆ 10,247 ಕೋಟಿ ತೆರಿಗೆ ವಿಧಿಸಿತ್ತು. 2015ರಲ್ಲಿ ಕೈರ್ನ್ ಸಂಸ್ಥೆಯ ಸುಮಾರು 1 ಬಿಲಿಯನ್ ಮೌಲ್ಯದ ಶೇರುಗಳನ್ನು ಸರಕಾರ ಮಾರಾಟ ಮಾಡಿತ್ತು, ಡಿವಿಡೆಂಡ್ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಹಾಗೂ 1,590 ಕೋಟಿ ಮೊತ್ತದ ತೆರಿಗೆ ಮರುಪಾವತಿ ಹಣವನ್ನು ತಡೆಹಿಡಿದಿತ್ತು.
ಇದನ್ನು ಪ್ರಶ್ನಿಸಿ, ಬ್ರಿಟನ್-ಭಾರತ ಹೂಡಿಕೆ ಒಪ್ಪಂದದಡಿ ಕೈರ್ನ್ ಸಂಸ್ಥೆ ಅಂತರ್ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಮೊಕದ್ದಮೆ ದಾಖಲಿಸಿತ್ತು. ದೀರ್ಘ ವಿಚಾರಣೆಯ ಬಳಿಕ ತೀರ್ಪು ನೀಡಿರುವ ತ್ರಿಸದಸ್ಯರ ನ್ಯಾಯಮಂಡಳಿ ಭಾರತ ಸರಕಾರದ ಕ್ರಮ ಸರಿಯಲ್ಲ ಎಂದು ತಿಳಿಸಿದೆ. ಜೊತೆಗೆ, ಸರಕಾರ ಮಾರಾಟ ಮಾಡಿರುವ ಶೇರುಗಳ, ಮುಟ್ಟುಗೋಲು ಹಾಕಿಕೊಂಡಿರುವ ಡಿವಿಡೆಂಡ್ಗಳನ್ನು ಮೊತ್ತವನ್ನು ಮರಳಿಸಬೇಕು ಮತ್ತು ತಡೆಹಿಡಿದಿರುವ ತೆರಿಗೆ ಮರುಪಾವತಿ ಹಣವನ್ನು ಬಿಡುಗಡೆಗೊಳಿಸುವಂತೆ ಮತ್ತು ಬಡ್ಡಿ ಸಹಿತ ಪಾವತಿಸುವಂತೆ ತಿಳಿಸಿದೆ. ಇದರ ಒಟ್ಟು ಮೊತ್ತ 1.4 ಬಿಲಿಯನ್ ಡಾಲರ್ ಆಗುತ್ತದೆ.
ಭಾರತ ಇದನ್ನು ಪಾವತಿಸಲು ತಪ್ಪಿದರೆ ಬ್ರಿಟನ್, ನೆದರ್ಲಾಂಡ್, ಫ್ರಾನ್ಸ್, ಕೆನಡಾ ಮತ್ತು ಅಮೆರಿಕದಲ್ಲಿರುವ ಭಾರತದ ನೌಕೆಗಳು, ಏರಿಂಡಿಯಾ ವಿಮಾನ, ಭಾರತದ ರಾಜತಾಂತ್ರಿಕ ಕಚೇರಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇರ್ನ್ ಸಂಸ್ಥೆ ಅನುಮತಿ ಕೋರುವ ಸಾಧ್ಯತೆಯಿದೆ.
ಹೇಗ್ನಲ್ಲಿರುವ ಅಂತರ್ ರಾಷ್ಟ್ರೀಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಅಥವಾ ಭಾರತದ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಭಾರತಕ್ಕಿದೆ. ಆದರೆ ಮಧ್ಯಸ್ಥಿಕೆ ನ್ಯಾಯಮಂಡಳಿ 582 ಪುಟಗಳ ವಿವರವಾದ ತೀರ್ಪು ನೀಡಿರುವುದರಿಂದ ಅಂತರ್ ರಾಷ್ಟ್ರೀಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ ಯಾವುದೇ ಪ್ರಯೋಜನವಾಗಲಿಕ್ಕಿಲ್ಲ. ಅಲ್ಲದೆ ಸುಪ್ರೀಂಕೋರ್ಟ್ಗೆ ಅಂತರ್ ರಾಷ್ಟ್ರೀಯ ನ್ಯಾಯಮಂಡಳಿಯ ಆದೇಶಕ್ಕೆ ತಡೆ ನೀಡುವ ಅಧಿಕಾರವಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಆದ್ದರಿಂದ ಕೇರ್ನ್ ಸಂಸ್ಥೆಗೆ ಭಾರತದಲ್ಲಿರುವ ತೈಲ ನಿಕ್ಷೇಪಗಳಲ್ಲಿ ಕಾರ್ಯ ನಿರ್ವಹಿಸಲು ಮತ್ತೆ ಅನುಮತಿ ನೀಡಿ ನ್ಯಾಯಾಲಯದ ಆದೇಶ ಪಾಲಿಸುವುದು ಸೂಕ್ತ ಎಂದು ಅಂತರ್ ರಾಷ್ಟ್ರೀಯ ಕಾನೂನು ವಿಷಯಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.