ಪ್ರಧಾನಿಯ ಘನತೆಯನ್ನು ಗೌರವಿಸುತ್ತೇವೆ, ಆದರೆ ನಮ್ಮ ಸ್ವಾಭಿಮಾನವನ್ನು ರಕ್ಷಿಸಲು ಬದ್ಧರಾಗಿದ್ದೇವೆ: ನರೇಶ್ ಟಿಕಾಯತ್
ಹೊಸದಿಲ್ಲಿ, ಜ.31: ಪ್ರತಿಭಟನಾ ನಿರತ ರೈತರು ಪ್ರಧಾನಿಯ ಘನತೆಯನ್ನು ಗೌರವಿಸುತ್ತಾರೆ. ಆದರೆ ತಮ್ಮ ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಲೂ ಬದ್ಧರಾಗಿದ್ದಾರೆ ಎಂದು ರೈತರ ಮುಖಂಡ ನರೇಶ್ ಟಿಕಾಯತ್ ಹೇಳಿದ್ದಾರೆ.
ಬಂಧಿತ ರೈತರನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಬೇಕು ಮತ್ತು ಮಾತುಕತೆಗೆ ಪೂರಕವಾಗುವ ಪರಿಸ್ಥಿತಿ ರೂಪಿಸಬೇಕು ಎಂದು ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಟಿಕಾಯತ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳಿಗೆ ಒಂದೂವರೆ ವರ್ಷ ತಡೆನೀಡುವ ಸರಕಾರದ ಕೊಡುಗೆ ಇನ್ನೂ ಚಾಲ್ತಿಯಲ್ಲಿದೆ. ರೈತ ಮುಖಂಡರೊಂದಿಗಿನ ಮಾತುಕತೆ ನಡೆಸಲು ಒಂದು ದೂರವಾಣಿ ಕರೆ ಸಾಕು ಎಂದು ಶನಿವಾರ ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಕಾಯತ್, ಸಮಸ್ಯೆಗೆ ಗೌರವಯುತ ಪರಿಹಾರ ಹುಡುಕಬೇಕು. ಒತ್ತಡಕ್ಕೆ ಮಣಿದು ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ ಎಂದರು.
ಜನವರಿ 26ರಂದು ನಡೆದ ಹಿಂಸಾಚಾರ ಪಿತೂರಿಯ ಭಾಗವಾಗಿದೆ. ತ್ರಿವರ್ಣಧ್ವಜ ಎಲ್ಲಕ್ಕಿಂತಲೂ ಮಿಗಿಲಾಗಿದೆ. ಅದಕ್ಕೆ ಅಗೌರವ ತೋರಲು ಯಾರಿಗೂ ನಾವು ಅವಕಾಶ ನೀಡುವುದಿಲ್ಲ. ಅದನ್ನು ಸಹಿಸಲೂ ಆಗದು ಎಂದು ಟಿಕಾಯತ್ ಹೇಳಿದ್ದಾರೆ.