ಎಫ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಶಿ ತರೂರ್, ರಾಜ್ ದೀಪ್ ಸರ್ದೇಸಾಯಿ
ಹೊಸದಿಲ್ಲಿ: ಗಣರಾಜ್ಯೋತ್ಸವ ದಿನ ದಿಲ್ಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ನಡೆದಿದ್ದ ಹಿಂಸಾಚಾರದ ಬಗ್ಗೆ ‘ದಾರಿ ತಪ್ಪಿಸುವ’ ಟ್ವೀಟ್ ಮಾಡಿದ್ದಾರೆಂಬ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿರುವ ಅನೇಕ ಪೊಲೀಸ್ ಪ್ರಕರಣಗಳು ಅಥವಾ ಎಫ್ ಐಆರ್ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಸುದ್ದಿ ನಿರೂಪಕ ರಾಜ್ ದೀಪ್ ಸರ್ದೇಸಾಯಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಪತ್ರಕರ್ತರಾದ ಮೃಣಾಲ್ ಪಾಂಡೆ, ಝಾಫರ್ ಅಘಾ, ಪರೇಶ್ ನಾಥ್ ಹಾಗೂ ಅನಂತ್ ನಾಥ್ ಕೂಡ ಮಂಗಳವಾರ ಸಂಜೆ ಎಫ್ ಐಆರ್ ಗಳ ವಿರುದ್ಧ ಸುಪ್ರೀಂಕೋರ್ಟಿನ ಕದ ತಟ್ಟಿದ್ದಾರೆ.
ಜನವರಿ 30ರಂದು ದಿಲ್ಲಿ ಪೊಲೀಸರು ಶಶಿ ತರೂರ್, ರಾಜ್ ದೀಪ್ ಸರ್ದೇಸಾಯಿ , ದಿ ಕಾರವಾನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದಿಲ್ಲಿಯಲ್ಲಿ ರೈತರ ರ್ಯಾಲಿಯ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಶಶಿ ತರೂರ್ ಹಾಗೂ ಇತರ ಆರು ಮಂದಿ ಪತ್ರಕರ್ತರ ವಿರುದ್ದ ನೊಯ್ಡಾ ಪೊಲೀಸರು ಇದಕ್ಕೂ ಮೊದಲೇ ದೇಶದ್ರೋಹ ಸಹಿತ ಇತರ ಪ್ರಕರಣಗಳನ್ನು ಹೊರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶ ಪೊಲೀಸರು ಕೂಡ ಶಶಿ ತರೂರ್ ಹಾಗೂ ಇತರ 6 ಪತ್ರಕರ್ತರ ವಿರುದ್ಧ 'ದಾರಿ ತಪ್ಪಿಸುವ' ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದರು.