"ಘಾಝಿಪುರದ ಗಡಿಯಲ್ಲಿ ಅನ್ನದಾತರನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿ ಆಘಾತವಾಯಿತು"
ಪ್ರತಿಭಟನಾಸ್ಥಳಕ್ಕೆ ತೆರಳಿದ್ದ ಪ್ರತಿಪಕ್ಷಗಳ ಪ್ರತಿಕ್ರಿಯೆ
ಹೊಸದಿಲ್ಲಿ:ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು 10 ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ 15 ವಿಪಕ್ಷಗಳ ಸಂಸದರು ಗುರುವಾರ ಬೆಳಗ್ಗೆ ದಿಲ್ಲಿ-ಘಾಝಿಪುರ ಗಡಿಗೆ ತೆರಳಿದ್ದಾರೆ. ಅಲ್ಲಿ ನಮ್ಮನ್ನು ಪೊಲೀಸರು ತಡೆದಿದ್ದಾರೆ ಎಂದು ಓರ್ವ ಸಂಸದರು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಹರ್ ಸಿಮ್ರತ್ ಕೌರ್ ಬಾದಲ್, ಎನ್ ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯ ಕನಿಮೋಳಿ ಹಾಗೂ ತೃಣಮೂಲ ಕಾಂಗ್ರೆಸ್ ನ ಸೌಗತಾ ರಾಯ್ ಸಹಿತ ವಿಪಕ್ಷ ಸಂಸದರು ಬಸ್ ನಲ್ಲಿ ದಿಲ್ಲಿ ಗಡಿ ತಲುಪಿದರು.
"ಘಾಝಿಪುರದ ಗಡಿಯಲ್ಲಿ ಸೃಷ್ಟಿಸಿರುವ ಪರಿಸ್ಥಿತಿಯನ್ನು ಮೊದಲ ಬಾರಿ ಕಣ್ಣಾರೆ ನೋಡಿದೆವು. ಅನ್ನದಾತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿ ಆಘಾತವಾಯಿತು. ಕಾಂಕ್ರೀಟ್ ತಡೆಗೋಡೆ ಹಾಗೂ ಮುಳ್ಳುತಂತಿಬೇಲಿಗಳ ಕೋಟೆಯ ಹಿಂದೆ ರೈತರನ್ನು ತಡೆ ಹಿಡಿಯಲಾಗಿದೆ. ಪ್ರತಿಭಟನಾಸ್ಥಳಕ್ಕೆ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕದಳ ಕೂಡ ಪ್ರವೇಶಿಸಲು ಸಾಧ್ಯವಿಲ್ಲ''ಎಂದು ಬಾದಲ್ ಟ್ವೀಟಿಸಿದ್ದಾರೆ.
"ನಾವು ರೈತರ ಪ್ರತಿಭಟನೆಯ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಬಹುದು. ಹೀಗಾಗಿ ನಾವಿಲ್ಲಿಗೆ ಬಂದಿದ್ದೇವೆ. ಸ್ಪೀಕರ್ ನಮಗೆ ಧ್ವನಿ ಎತ್ತಲು ಬಿಡುತ್ತಿಲ್ಲ. ಇಲ್ಲಿ ಏನು ನಡೆಯುತ್ತಿದೆ ಎಂಬ ಕುರಿತು ಎಲ್ಲ ಪಕ್ಷಗಳು ವಿವರಗಳನ್ನು ನೀಡಲಿದ್ದೇವೆ'' ಎಂದು ಸುದ್ದಿಸಂಸ್ಥೆ ಎಎನ್ ಐಗೆ ಬಾದಲ್ ತಿಳಿಸಿದರು.