ಕೇಂದ್ರ ಸಚಿವೆಯಾಗಿದ್ದಾಗ ಗಂಗಾ ನದಿಯಲ್ಲಿ ವಿದ್ಯುತ್ ಯೋಜನೆಗೆ ವಿರೋಧಿಸಿದ್ದೆ: ಉಮಾಭಾರತಿ
ಹೊಸದಿಲ್ಲಿ: ಹಿಮ ನದಿ ಸ್ಫೋಟದಿಂದ ಉಂಟಾದ ಉತ್ತರಾಖಂಡ ಪ್ರವಾಹ ದುರಂತವು ಕಳವಳಕಾರಿ ಹಾಗೂ ಎಚ್ಚರಿಕೆಯಾಗಿದೆ ಎಂದ ಬಿಜೆಪಿ ನಾಯಕಿ ಉಮಾಭಾರತಿ, ನಾನು ಸಚಿವೆಯಾಗಿದ್ದಾಗ ಗಂಗಾ ಹಾಗೂ ಅದರ ಪ್ರಮುಖ ಉಪ ನದಿಗಳ ಮೇಲೆ ಯಾವುದೇ ವಿದ್ಯುತ್ ಯೋಜನೆಗಳ ನಿರ್ಮಾಣಗಳ ವಿರುದ್ಧ ಮಾತನಾಡಿದ್ದೆ ಎಂದರು.
ಮೋದಿ ಸರಕಾರದ ಮೊದಲ ಅವಧಿಯಲ್ಲಿ ಉಮಾಭಾರತಿ ಅವರು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾನದಿ ಕಾಯಕಲ್ಪದ ಸಚಿವೆಯಾಗಿದ್ದರು.
ಹಿಮ ನದಿ ಒಡೆದಿರುವುದರಿಂದ ವಿದ್ಯುತ್ ಯೋಜನೆ ಹಾನಿಯಾಗಿದೆ. ಇದು ಭಾರೀ ಬಿಕ್ಕಟ್ಟನ್ನು ಹುಟ್ಟುಹಾಕಿದೆ ಎಂದು ಹಿಂದಿಯಲ್ಲಿ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.
ಹಿಮಾಲಯದ ಋಷಿಗಂಗಾದಲ್ಲಿ ಸಂಭವಿಸಿದ ಈ ದುರಂತ ಕಳವಳಕಾರಿ ಹಾಗೂ ಎಚ್ಚರಿಕೆಯ ವಿಚಾರವಾಗಿದೆ. ನಾನು ಮಂತ್ರಿಯಾಗಿದ್ದಾಗ ಹಿಮಾಲಯದ ಉತ್ತರಾಖಂಡದ ಅಣೆಕಟ್ಟುಗಳ ಬಗ್ಗೆ ನನ್ನ ಸಚಿವಾಲಯವು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಇದು ಬಹಳ ಸೂಕ್ಷ್ಮ ಪ್ರದೇಶವೆಂದು ವಿನಂತಿಸಿತ್ತು ಎಂದು ರವಿವಾರ ಟ್ವೀಟ್ ನಲ್ಲಿ ಉಮಾಭಾರತಿ ತಿಳಿಸಿದ್ದಾರೆ.
Next Story