ದೇಶದಲ್ಲಿ 'ಆಂದೋಲನ್ ಜೀವಿ'ಗಳೆಂಬ ಹೊಸ ಸಮುದಾಯವೊಂದು ತಲೆಯೆತ್ತಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ದೇಶದಲ್ಲಿ 'ಆಂದೋಲನ್ ಜೀವಿ'ಗಳೆಂಬ ಹೊಸ ಸಮುದಾಯವೊಂದು ತಲೆಯೆತ್ತಿದೆ. ಈ ಸಮುದಾಯದ ಮಂದಿ ಪ್ರತಿಯೊಂದು ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡು ದೇಶಕ್ಕೆ ಒಂದು ಪೀಡೆಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ಇಂದು ರಾಜ್ಯಸಭೆಯಲ್ಲಿ ವಂದನಾ ನಿರ್ಣಯ ವೇಳೆ ಭಾಷಣ ಮಾಡಿದ ವೇಳೆ ಪ್ರಧಾನಿ ಮೇಲಿನ ಮಾತುಗಳನ್ನು ಹೇಳಿದ್ದಾರೆ.
"ಶ್ರಮ್ ಜೀವಿ, ಬುದ್ಧಿ ಜೀವಿ ಎಂಬ ಕೆಲ ಪದಗಳ ಕುರಿತು ನಮಗೆಲ್ಲಾ ತಿಳಿದಿದೆ. ಆದರೆ ಕೆಲ ಸಮಯದಿಂದ ಹೊಸ ಸಮುದಾಯವೊಂದು ದೇಶದಲ್ಲಿ ಕಾಣಿಸುತ್ತಿದೆ- 'ಆಂದೋಲನ್ ಜೀವಿ'. ಎಲ್ಲಿ ಪ್ರತಿಭಟನೆ ನಡೆಯುತ್ತದೆಯೋ ಅಲ್ಲಿ ಈ ಸಮುದಾಯ ಕಾಣಿಸುತ್ತದೆ, ಅದು ವಕೀಲರ, ವಿದ್ಯಾರ್ಥಿಗಳ ಅಥವಾ ಕಾರ್ಮಿಕರ ಪ್ರತಿಭಟನೆಯಿರಬಹುದು, ಕೆಲವೊಮ್ಮೆ ಎದುರು ಕಾಣಿಸಿಕೊಳ್ಳುವ ಈ 'ಆಂದೋಲನ್ ಜೀವಿ'ಗಳು ಕೆಲವೊಮ್ಮೆ ಹಿಂದಿನಿಂದ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೆ ಪ್ರತಿಭಟನೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ, ಇಂತಹ ಜನರನ್ನು ಗುರುತಿಸಿ ದೇಶವನ್ನು ಅವರಿಂದ ರಕ್ಷಿಸಬೇಕು,'' ಎಂದು ಪರೋಕ್ಷವಾಗಿ ರೈತ ಹೋರಾಟವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು.
ಹೊಸ ರೀತಿಯ ಎಫ್ಡಿಐ- ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಕೂಡ ಪ್ರಧಾನಿ ಹೇಳಿದರು. ರೈತ ಪ್ರತಿಭಟನೆಯನ್ನು ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳು ಮಾಡಿದ ಟ್ವೀಟ್ ಗುರಿಯಾಗಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.