ಆನ್ ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಾಟ: ವಂಚನೆಗೊಳಗಾಗಿ 34,000ರೂ. ಕಳೆದುಕೊಂಡ ಕೇಜ್ರಿವಾಲ್ ಪುತ್ರಿ
ಹೊಸದಿಲ್ಲಿ: ಆನ್ಲೈನ್ ವಂಚಕರ ಮೋಸದ ಜಾಲಕ್ಕೆ ಸಿಲುಕಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ 34,000 ರೂ. ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೆಕೆಂಡ್ ಹ್ಯಾಂಡ್ ಸೋಫಾ ಒಂದನ್ನು ಜನಪ್ರಿಯ ಓಎಲ್ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡಲು ಹರ್ಷಿತಾ ಮುಂದಾಗಿದ್ದರು. ಆಕೆಯ ಲಿಸ್ಟಿಂಗ್ ನೋಡಿದ ವ್ಯಕ್ತಿಯೊಬ್ಬ ಆಕೆಯನ್ನು ಸಂಪರ್ಕಿಸಿದ್ದ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಸಣ್ಣ ಮೊತ್ತವನ್ನು ಆಕೆಯ ಖಾತೆಗೆ ಜಮೆ ಮಾಡಿದ ಆತ ನಂತರ ಸೋಫಾಗೆ ತಾನು ನೀಡಲು ಮುಂದೆ ಬಂದಿರುವ ಮೊತ್ತವನ್ನು ಸಂಪೂರ್ಣವಾಗಿ ಜಮೆ ಮಾಡುವುದಾಗಿ ಹೇಳಿ ಆಕೆಗೆ ಒಂದು ಬಾರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದ. ಆಕೆ ಅಂತೆಯೇ ಮಾಡಿದಾಗ ಆಕೆಯ ಖಾತೆಯಿಂದ ಎರಡು ಕಂತುಗಳಲ್ಲಿ 20,000 ರೂ. ಹಾಗೂ 14,000 ರೂ. ಡೆಬಿಟ್ ಆಗಿತ್ತು.
ತಕ್ಷಣ ಈ ಕುರಿತು ಸಿಎಂ ನಿವಾಸದ ಪಕ್ಕದಲ್ಲಿಯೇ ಇರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿ ಆರೋಪಿಯ ಶೋಧಕ್ಕೆ ಮುಂದಾಗಿದ್ದಾರೆ.