ಪ್ರಧಾನಿ ಮೋದಿ ತಮ್ಮ ಜೀವಮಾನದಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ: ರಾಕೇಶ್ ಟಿಕಾಯತ್
ಹೊಸದಿಲ್ಲಿ: ರೈತರ ಪ್ರತಿಭಟನೆ ಹೀಗೆಯೇ ಮುಂದುವರಿಯಲಿದ್ದು, ಇಡೀ ದೇಶಕ್ಕೆ ಹರಡಲಿದೆ. ನಾಲ್ಕು ಲಕ್ಷವಲ್ಲ, 40 ಲಕ್ಷ ಟ್ರ್ಯಾಕ್ಟರ್ ಗಳ ರ್ಯಾಲಿ ನಡೆಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.
ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೊವಾದಲ್ಲಿ “ಕಿಸಾನ್ ಮಹಾಪಂಚಾಯತ್’’ ಅನ್ನು ಉದ್ದೇಶಿಸಿ ಟಿಕಾಯತ್ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೈತರ ಆಂದೋಲನ ಕುರಿತ ಟೀಕೆಗೆ ಪ್ರತಿಕ್ರಿಯಿಸಿರುವ ಟಿಕಾಯತ್, “ಅವರು(ಪ್ರಧಾನಿ)ತಮ್ಮ ಜೀವನದಲ್ಲಿ ಯಾವುದೇ ಆಂದೋಲನದ ಭಾಗವಾಗಿರಲಿಲ್ಲ. ವಾಸ್ತವವಾಗಿ ಅವರು ದೇಶವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆಂದೋಲನ ಜೀವಿಗಳ ಬಗ್ಗೆ ಅವರಿಗೇನು ಗೊತ್ತು?ಭಗತ್ ಸಿಂಗ್, ಲಾಲ್ ಕೃಷ್ಣ ಅಡ್ವಾಣಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದರು.
"ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯು ಈ ವರ್ಷದ ಅಕ್ಟೋಬರ್ 2ರ ಬಳಿಕವೂ ನಡೆಯಲಿದೆ. ಅ.2ರ ನಂತರ ಪ್ರತಿಭಟನೆ ಅಂತ್ಯವಾಗದು. ಪಾಳಿಯ ಪ್ರಕಾರ ರೈತರು ಪ್ರತಿಭಟನಾ ಸ್ಥಳಗಳಿಗೆ ವಾಪಸ್ ಬರುತ್ತಿರುತ್ತಾರೆ'' ಎಂದರು.