ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪುತ್ರಿಗೆ ವಂಚನೆ ಪ್ರಕರಣ: ಮೂವರ ಬಂಧನ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪುತ್ರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅರವಿಂದ ಕೇಜ್ರಿವಾಲ್ ಅವರ ಪುತ್ರಿಯನ್ನು ವಂಚಿಸಿದ್ದಕ್ಕಾಗಿ ಸಾಜಿದ್, ಕಪಿಲ್ ಹಾಗೂ ಮನ್ವೇಂದ್ರ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇ-ಕಾಮರ್ಸ್ ಸೈಟ್ ಗಳಲ್ಲಿ ನಕಲಿ ಖಾತೆಗಳನ್ನು ಬಳಸುತ್ತಿದ್ದ ಓರ್ವ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ ಎಂದು ಮೂಲವೊಂದು ಎಎನ್ ಐಗೆ ತಿಳಿಸಿದೆ.
ಸೆಕೆಂಡ್ ಹ್ಯಾಂಡ್ ಸೋಫಾವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಫೆಬ್ರವರಿ 7ರಂದು ಕೇಜ್ರಿವಾಲ್ ಪುತ್ರಿಗೆ 34,000 ರೂ. ವಂಚಿಸಲಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಗ್ರಾಹಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕೇಜ್ರಿವಾಲ್ ಪುತ್ರಿಗೆ ಅಲ್ಪ ಮೊತ್ತವನ್ನು ಕಳುಹಿಸಿದ ನಂತರ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ಕೇಳಿಕೊಂಡಿದ್ದ. ಕೇಜ್ರಿವಾಲ್ ಪುತ್ರಿ ಬಾರ್ ಕೋಡ್ ಸ್ಕ್ಯಾನಿಂಗ್ ಮಾಡಿದಾಗ ಈಕೆಯ ಖಾತೆಯಿಂದ ಎರಡು ಕಂತುಗಳಲ್ಲಿ ಹಣ ಡೆಬಿಟ್ ಆಗುತ್ತದೆ. ಮೊದಲಿಗೆ 20,000 ಹಾಗೂ ನಂತರ 14,000 ರೂ. ಡೆಬಿಟ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.