ಒಡಿಶಾ: ತೈಲ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಭುವನೇಶ್ವರ, ಫೆ.15: ತೈಲ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಸೋಮವಾರ ಒಡಿಶಾದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ 6 ಗಂಟೆಗಳ ರಾಜ್ಯವ್ಯಾಪಿ ಬಂದ್ ಪ್ರತಿಭಟನೆ ನಡೆಯಿತು. ನವರಂಗಪುರ ಜಿಲ್ಲೆಯ ಉಮೇರ್ಕೋಟ್ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯಂತೆ ದಿರಿಸು ಧರಿಸಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಎತ್ತಿನ ಗಾಡಿಯಲ್ಲಿ ನಿಂತು ‘ ತೈಲ ದರ ಇಳಿಯುತ್ತಿದೆಯೇ ? ಎಂದು ಅಲ್ಲಿ ನೆರೆದಿದ್ದವರನ್ನು ಪ್ರಶ್ನಿಸುವ ಮೂಲಕ ಗಮನ ಸೆಳೆದಿದ್ದಾನೆ. ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಈ ಹಿಂದೆ ನರೇಂದ್ರ ಮೋದಿ ಮಾಡಿದ್ದ ಭಾಷಣದ ಧ್ವನಿಮುದ್ರಿಕೆಯನ್ನು ಹಿನ್ನೆಲೆಯಲ್ಲಿ ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಗಿತ್ತು. ಮೋದಿಯಂತೆ ದಿರಿಸು ಧರಿಸಿದ್ದ ಕಾರ್ಯಕರ್ತ, ಧ್ವನಿಮುದ್ರಿಕೆಗೆ ಅನುಗುಣವಾಗಿ ತುಟಿಯ ಚಲನೆ ಮೂಲಕ ಮೋದಿ ಹಾವಭಾವ ಅನುಕರಿಸಿದ್ದಾನೆ.
ಮಾಜಿ ಸಂಸದ ಪ್ರದೀಪ್ ಮಜ್ಹಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿತ್ತು. ನವರಂಗಪುರ ಜಿಲ್ಲೆಯಲ್ಲಿ ಅಂಗಡಿ, ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿತ್ತು. ವಾಹನ ಸಂಚಾರವೂ ವಿರಳವಾಗಿತ್ತು ಎಂದು ವರದಿಯಾಗಿದೆ.