ಅಸ್ಸಾಂ ಸಚಿವ ಹಿಮಾಂತ ಬಿಸ್ವಾಸ್ ಶರ್ಮಾ ವ್ಯಕ್ತಿತ್ವಕ್ಕೆ ಕಳಂಕ ಆರೋಪ: ಇಬ್ಬರು ಪತ್ರಕರ್ತರ ಬಂಧನ
ಗುವಾಹಟಿ, ಫೆ. 17: ಅಸ್ಸಾಂ ಸಚಿವ ಹಿಮಾಂತ ಬಿಸ್ವಾಸ್ ಶರ್ಮಾ ಅವರು ತನ್ನ ಪುತ್ರಿಯನ್ನು ಅಪ್ಪಿಕೊಂಡ ಫೋಟೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶರ್ಮಾ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲು ಪ್ರಯತ್ನಿಸಿದ ಇಬ್ಬರು ಪತ್ರಕರ್ತರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಸುದ್ದಿ ವೆಬ್ಸೈಟ್ ಪ್ರತಿಬಿಂಬ ಲೈವ್ನ ಪ್ರಧಾನ ಸಂಪಾದಕ ತೌಫೀಕುದ್ದೀನ್ ಅಹ್ಮದ್ ಹಾಗೂ ಅದರ ಸುದ್ದಿ ಸಂಪಾದಕ ಇಕ್ಬಾಲ್ ಅವರನ್ನು ಪಿತೂರಿಯ ತನಿಖೆ ನಡೆಸಲು ಬಂಧಿಸಲಾಗಿದೆ ಎಂದು ಹೆಚ್ಚುವರಿ ಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಜಿ.ಪಿ. ಸಿಂಗ್ ಹೇಳಿದ್ದಾರೆ. ಪೋಕ್ಸೊ ಕಾಯ್ದೆಯ ಕಠಿಣ ನಿಯಮಗಳ ಅಡಿಯಲ್ಲಿ ಪೊಲೀಸರು ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಪೋಕ್ಸೊ ಅಡಿಯಲ್ಲಿ ದಿಸ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಕರಣದ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವರು ತನ್ನ ಪುತ್ರಿಯನ್ನು ಅಪ್ಪಿಕೊಳ್ಳುತ್ತಿರುವ ಫೋಟೊವನ್ನು ವೆಬ್ಸೈಟ್ನಲ್ಲಿ ಶೇರ್ ಮಾಡಲಾಗಿತ್ತು. ಅನಂತರ ಈ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಫೋಟೊದಲ್ಲಿರುವ ಬಾಲಕಿಯನ್ನು ಸಚಿವರ ಪುತ್ರಿ ಎಂದು ಉಲ್ಲೇಖಿಸದೇ ಇರುವುದಕ್ಕೆ ಅನಂತರ ವೆಬ್ಸೈಟ್ ಕ್ಷಮೆ ಕೋರಿತ್ತು. ಅಲ್ಲದೆ, ಶರ್ಮಾ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶದಿಂದ ಫೋಟೊವನ್ನು ಹಂಚಿಕೊಂಡವರನ್ನು ತರಾಟೆಗೆ ತೆಗೆದುಕೊಂಡಿತ್ತು.