ಅತಿಥಿ ಗೃಹದಲ್ಲಿ ಸೊಳ್ಳೆ ಪರದೆ ಒದಗಿಸಲಿಲ್ಲ ಎಂದು ದೂರು ನೀಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶದ ಅಧಿಕಾರಿಯ ಅಮಾನತು
ಭೋಪಾಲ್, ಫೆ. 19: ರಾಜ್ಯದ ಸಿಧಿ ಜಿಲ್ಲೆಯ ಸರ್ಕಿಟ್ ಹೌಸ್ನಲ್ಲಿ ಸೊಳ್ಳೆಗಳಿವೆ ಹಾಗೂ ಟ್ಯಾಂಕ್ ಉಕ್ಕಿ ಹರಿಯುತ್ತಿದೆ ಎಂದು ವಿಶೇಷ ಅತಿಥಿಯೊಬ್ಬರು ಈ ವಾರ ದೂರಿದ ಬಳಿಕ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಸರ್ಕಿಟ್ ಹೌಸ್ನಲ್ಲಿ ಬುಧವಾರ ಉಳಿದುಕೊಂಡ ವಿಶೇಷ ಅತಿಥಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಮುಖ್ಯಮಂತ್ರಿ ಅವರು ಬರುವ ಬಗ್ಗೆ ಅಧಿಕಾರಿಗೆ ತಿಳಿದಿತ್ತು. ಆದರೆ, ಸರಕಾರಿ ಅತಿಥಿ ಗೃಹದಲ್ಲಿ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಅವರು ವಿಫಲರಾಗಿದ್ದಾರೆ ಎಂದು ಅಧಿಕಾರಿಗೆ ನೋಟಿಸು ಜಾರಿ ಮಾಡಿದ ವಿಭಾಗೀಯ ಆಯುಕ್ತ ರಾಜೇಶ್ ಕುಮಾರ್ ಜೈನ್ ಗುರುವಾರ ಹೇಳಿದ್ದಾರೆ.
ಸರ್ಕಿಟ್ ಹೌಸ್ನ ಕೊಠಡಿಯಲ್ಲಿ ಸೊಳ್ಳೆ ಪರದೆ ಇರಲಿಲ್ಲ. ಬೆಳಗ್ಗೆ 2.30ರ ಹೊತ್ತಿಗೆ ಸೊಳ್ಳೆ ಔಷಧ ಸಿಂಪಡಿಸಲಾಯಿತು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದೂರು ನೀಡಿದ್ದರು. ಟ್ಯಾಂಕ್ನಿಂದ ಬೆಳಗ್ಗೆ 4 ಗಂಟೆಗೆ ವರೆಗೂ ನೀರು ಉಕ್ಕಿ ಹರಿಯುತ್ತಿತ್ತು. ಅನಂತರ ತಾನು ಮೋಟರ್ ಅನ್ನು ಆಫ್ ಮಾಡಿದೆ ಎಂದು ಚೌಹಾಣ್ ಅವರು ತನ್ನ ಸಂಕಷ್ಟವನ್ನು ದೂರಿನಲ್ಲಿ ತೋಡಿಕೊಂಡಿದ್ದಾರೆ.