ರೈತರ ಪ್ರತಿಭಟನೆ ಬಹಿರಂಗಗೊಳಿಸುವುದು ದೇಶದ್ರೋಹವಾದರೆ, ಜೈಲಿನಲ್ಲಿರುವುದೇ ಉತ್ತಮ
ನ್ಯಾಯಾಲಯಕ್ಕೆ ತಿಳಿಸಿದ ದಿಶಾ ರವಿ
ಹೊಸದಿಲ್ಲಿ: ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟಿಸ್ ನೊಂದಿಗೆ ದಿಶಾ ರವಿ ನಂಟಿರುವ ಕುರಿತು ಯಾವುದೇ ಪುರಾವೆ ಇಲ್ಲ. ರೈತರ ಪ್ರತಿಭಟನೆಯನ್ನು ಜಾಗತಿಕವಾಗಿ ಬಹಿರಂಗಪಡಿಸಿರುವುದು ದೇಶದ್ರೋಹವಾದರೆ ದಿಶಾ ಜೈಲಿನಲ್ಲಿರುವುದು ಉತ್ತಮ ಎಂದು ಪರಿಸರ ಕಾರ್ಯಕರ್ತೆ ದಿಶಾ ರವಿ ವಕೀಲರಾದ ಸಿದ್ದಾರ್ಥ್ ಅಗರ್ವಾಲ್ ಶನಿವಾರ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.
ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಶನಿವಾರ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ 22ರ ಹರೆಯದ ದಿಶಾ ರವಿ ಪರ ವಾದಿಸಿದ ಸಿದ್ದಾರ್ಥ್ ಅಗರ್ವಾಲ್, ಯಾವುದೇ ಕಾರಣವಿಲ್ಲದೆ ಬಂಡಾಯಗಾರನಾಗುವುದಿಲ್ಲ. ಪರಿಸರ ಹಾಗೂ ಕೃಷಿ ನಡುವೆ ಪರಸ್ಪರ ಸಂಬಂಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಯೋಗ ಹಾಗೂ ಚಹಾವನ್ನು ಗುರಿ ಮಾಡಲಾಗುತ್ತಿದೆ ಎಂದು ಎಫ್ ಐಆರ್ ನಲ್ಲಿನ ಆರೋಪವನ್ನು ಉಲ್ಲೇಖಿಸಿದ ದಿಶಾ ಪರ ವಕೀಲರು, ಇದೊಂದು ಅಪರಾಧವೇ? ಎಂದು ಪ್ರಶ್ನಿಸಿದರು.
ಕೆಂಪುಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. ಹಿಂಸೆಯಲ್ಲಿ ತೊಡಗಿದ್ದವರು ಟೂಲ್ ಕಿಟ್ ನಿಂದ ಸ್ಫೂರ್ತಿ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಜನವರಿ 26ರಂದು ರೈತರ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ನಡೆದಿರುವ ಗಲಭೆಗೆ ಟೋಲ್ ಕಿಟ್ ಕಾರಣ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಸಿದ್ದಾರ್ಥ್ ಅಗರ್ವಾಲ್ ವಾದಿಸಿದರು.