"ರೈತರ ಕುರಿತು ಪಾಪ್ ಸ್ಟಾರ್ ಗಳು ಮಾತನಾಡುತ್ತಾರೆ, ಪ್ರಧಾನಿ ಮೋದಿ ಮಾತನಾಡುವುದಿಲ್ಲ"
ವಯನಾಡ್ ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ
ವಯನಾಡ್: ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿದ್ದ ರ್ಯಾಲಿಯನ್ನು ಮುನ್ನಡೆಸಿದ ಸಂಸದ ರಾಹುಲ್ ಗಾಂಧಿ ರೈತರ ಕುರಿತಾದಂತೆ ಕೇಂದ್ರ ಸರಕಾರದ ಮೌನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಹಲವಾರು ಪಾಪ್ ಸ್ಟಾರ್ ಗಳು ರೈತರ ಪ್ರತಿಭಟನೆಯ ಕುರಿತು ಮಾತನಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ" ಎಂದು ಹೇಳಿಕೆ ನೀಡಿದರು.
"ನಾನು ಇದನ್ನು ಸಂಸತ್ತಿನಲ್ಲಿ ಹೇಳಿದ್ದೇನೆ ಹಮ್ ದೋ, ಹಮಾರೆ ದೋ (ನಾವು ಇಬ್ಬರು, ನಮಗಿಬ್ಬರು). ಸರ್ಕಾರದಲ್ಲಿ ಇಬ್ಬರು, ಸರ್ಕಾರದ ಹೊರಗೆ ಇಬ್ಬರು ಜನರೊಂದಿಗೆ ಪಾಲುದಾರಿಕೆ ನಡೆಸುತ್ತಿದ್ದಾರೆ..ಭಾರತೀಯ ಕೃಷಿ ವ್ಯವಸ್ಥೆಯನ್ನು ಈ ನಾಲ್ವರು ನಿರ್ವಹಸಿಬೇಕೆನ್ನುವುದು ಅವರ ಅಭಿಲಾಷೆ. ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಈ ಬಂಡವಾಳಶಾಹಿಗಳಿಗೆ ಮಾರಾಟ ಮಾಡಬೇಕು ಎಂಬುದು ಅವರ ಆಲೋಚನೆ "ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಕೇರಳದಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಡ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ತೀವ್ರವಾಗಿ ವಿರೋಧಿಸಿವೆ.
ಕಾರ್ಯಕ್ರಮದಲ್ಲಿ ಒಟ್ಟು 200ಕ್ಕೂ ಹೆಚ್ಚಿನ ಟ್ರ್ಯಾಕ್ಟರ್ ಗಳು ಭಾಗವಹಿಸಿದ್ದು, ರಾಹುಲ್ ಗಾಂಧಿಯೂ ಟ್ರ್ಯಾಕ್ಟರ್ ಚಲಾಯಿಸಿದರು. ಕಲ್ಪೆಟ್ಟಾದಲ್ಲಿ ಈ ಹಿಂದೆ ನಡೆದಿದ್ದ ವಿಮಾನ ಅಪಘಾತದಲ್ಲಿ ಬದುಕುಳಿದವರನ್ನು ಅವರು ಮಾತನಾಡಿಸಿದರು.