ಭಾಷಣದ ಮಧ್ಯೆ ಘೋಷಣೆ ಕೂಗಿದ ಅತ್ಯಾಚಾರ ಸಂತ್ರಸ್ತೆಯ ತಾಯಿ: ಪ್ರಿಯಾಂಕ ಗಾಂಧಿ ಮಾಡಿದ್ದೇನು ಗೊತ್ತೇ?
ನೆರೆದವರ ಮನಗೆದ್ದ ಪ್ರಿಯಾಂಕಾ ನಡವಳಿಕೆ
ಹೊಸದಿಲ್ಲಿ: ಉತ್ತರ ಪ್ರದೇಶದ ಮಥುರಾದಲ್ಲಿ ಮಂಗಳವಾರ ರೈತರ ಸಭೆಯ ವೇಳೆ ಅತ್ಯಾಚಾರ ಸಂತ್ರಸೆಯ ತಾಯಿ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದಾಗ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ತಮ್ಮ ಭಾಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದು ಮಾತ್ರವಲ್ಲದೇ ಕೂಡಲೇ ಮುಖ್ಯಮಂತ್ರಿಗೆ ಕರೆ ಮಾಡಿ ಈ ಕುರಿತು ಗಮನ ಹರಿಸುವಂತೆ ಹೇಳಿಕೆ ನೀಡಿದ ಘಟನೆ ನಡೆದಿದೆ.
ಮಹಿಳೆಯ ಪುತ್ರಿಯ ಮೇಲೆ ರಾಜಸ್ಥಾನದ ಭರತಪುರ್ ಎಂಬಲ್ಲಿ ಅತ್ಯಾಚಾರ ನಡೆದಿತ್ತೆನ್ನಲಾಗಿದೆ, ಮಥುರಾದಲ್ಲಿ ತಮ್ಮ ಸಂಬಂಧಿಕರ ಜತೆಗಿರುವ ಮಹಿಳೆ ಪ್ರಿಯಾಂಕ ಅವರು ರ್ಯಾಲಿಗೆ ಬರುತ್ತಾರೆಂದು ತಿಳಿದು ನ್ಯಾಯಕ್ಕಾಗಿ ಆಗ್ರಹಿಸಲು ಅಲ್ಲಿಗೆ ಬಂದಿದ್ದರು. ಆಕೆ ಘೋಷಣೆ ಕೂಗುತ್ತಿದ್ದಂತೆಯೇ ಭಾಷಣ ನಿಲ್ಲಿಸಿದ ಪ್ರಿಯಾಂಕ ಆಕೆಯನ್ನು ತಮ್ಮ ಬಳಿಗೆ ಕರೆಸಿಕೊಂಡರಲ್ಲದೆ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕರೆ ಮಾಡಿ ಅತ್ಯಾಚಾರ ಸಂತ್ರಸ್ತೆಗೆ ಸಹಾಯ ಮಾಡುವಂತೆ ಕೋರಿದರು. ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಗೆಹ್ಲೋಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈ ಘಟನೆಯ ಕುರಿತು ಟ್ವೀಟ್ ಮಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮಾದ್ಯಮ ಸಲಹೆಗಾರ ಶಲಭ್ ಮಣಿದ ತ್ರಿಪಾಠಿ, ಕಾಂಗ್ರೆಸ್ ನಾಯಕಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಖಂಡಿಸಿದ್ದಾರೆ.