ನೀರವ್ ಮೋದಿಗೆ ಮುಂಬೈಯ ಆರ್ಥರ್ ರಸ್ತೆ ಜೈಲಿನಲ್ಲಿ ಸೆಲ್ ಸಿದ್ಧ
ಹೊಸದಿಲ್ಲಿ, ಫೆ. 26: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಭಾರತಕ್ಕೆ ಬೇಕಾಗಿರುವ ವಜ್ರೋದ್ಯಮಿ ನೀರವ್ ಮೋದಿಯ ಗಡಿಪಾರಿಗೆ ಬ್ರಿಟನ್ ನ್ಯಾಯಾಲಯ ಆದೇಶ ನೀಡಿದ ದಿನದ ಬಳಿಕ ಅವರನ್ನು ಇರಿಸಲು ಮುಂಬೈ ಆರ್ಥರ್ ರಸ್ತೆಯಲ್ಲಿರುವ ಕಾರಾಗೃಹವನ್ನು ಸಿದ್ಧಗೊಳಿಸಲಾಗುತ್ತಿದೆ.
ನೀರವ್ ಮೋದಿಯನ್ನು ಬ್ರಿಟನ್ನಿಂದ ಮುಂಬೈಗೆ ಕರೆ ತಂದ ಬಳಿಕ ಇಲ್ಲಿನ ಬ್ಯಾರಕ್ ನಂಬರ್ 12ರ ಮೂರರಲ್ಲಿ ಒಂದು ಸೆಲ್ನಲ್ಲಿ ಇರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನೀರವ್ ಮೋದಿಯನ್ನು ಈ ಕಾರಾಗೃಹದಲ್ಲಿ ಇರಿಸಲು ಎಲ್ಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಕಾರಾಗೃಹದ ಸೆಲ್ ಅವರಿಗಾಗಿ ಸಿದ್ಧವಾಗಿದೆ. ಅವರ ಗಡಿಪಾರಿಗೆ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ನ್ಯಾಯಾಲಯದಲ್ಲಿ ಉತ್ತರಿಸಬೇಕಾದ ಪ್ರಕರಣ ಇದೆ. ಭಾರತದಲ್ಲಿ ನ್ಯಾಯ ಸಿಗಲಾರದು ಎಂಬ ಅವರ ವಾದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಬ್ರಿಟನ್ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ಹೇಳಿದ್ದರು. ಈ ಆದೇಶದೊಂದಿಗೆ ನೀರವ್ ಮೋದಿ ತನ್ನನ್ನು ಗಡಿಪಾರು ಮಾಡುವುದನ್ನು ವಿರೋಧಿಸುವ ಎಲ್ಲ ನೆಲೆಯ ಎರಡು ವರ್ಷಗಳ ಕಾನೂನು ಹೋರಾಟ ಅಂತ್ಯ ಕಂಡಿದೆ.