ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ʼಲವ್ ಜಿಹಾದ್ʼ ತಡೆ ಕಾನೂನು ಜಾರಿಗೆ ತರುತ್ತೇವೆ: ಕೆ. ಸುರೇಂದ್ರನ್
PHOTO: onmanorama.com
ಪಾಲಕ್ಕಾಡ್: ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತಹಾಕಿ ಅಧಿಕಾರಕ್ಕೆ ತಂದರೆ ಕೇರಳ ರಾಜ್ಯದಲ್ಲಿ 'ಲವ್ ಜಿಹಾದ್' ತಡೆಗಟ್ಟುವ ಕಾನೂನನ್ನು ಜಾರಿಗೊಳಿಸುತ್ತೇವೆ. ಏಕೆಂದರೆ ಅಂತಹ ಪ್ರಕರಣಗಳು ಉತ್ತರ ಪ್ರದೇಶಕ್ಕಿಂತ ಇಲ್ಲಿ ಹೆಚ್ಚು ಪ್ರಚಲಿತದಲ್ಲಿವೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಶನಿವಾರ ಹೇಳಿಕೆ ನೀಡಿದ್ದಾರೆ. ಚುನಾವಣೆಯಹಿನ್ನೆಲೆಯಲ್ಲಿ ಕೇರಳ ಬಿಜೆಪಿಯು ʼವಿಜಯ ಯಾತ್ರಾʼ ಕಾರ್ಯಕ್ರಮವನ್ನು ಕೈಗೊಂಡಿದ್ದು, ಈ ವೇಳೆ ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕ್ರಿಶ್ಚಿಯನ್ ಸಮುದಾಯವು ʼಲವ್ ಜಿಹಾದ್ʼ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ಅವರನ್ನು ಹೆಚ್ಚಾಗಿ ಗುರಿಪಡಿಸಲಾಗುತ್ತಿದೆ ಎಂದು ವರದಿಯಾಗುತ್ತಿದೆ ಮತ್ತು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುರೇಂದ್ರನ್ ಹೇಳಿದ್ದಾರೆ.
"ಉತ್ತರ ಪ್ರದೇಶಕ್ಕಿಂತ ಕೇರಳದಲ್ಲಿ ಲವ್ ಜಿಹಾದ್ ಹೆಚ್ಚು ಪ್ರಚಲಿತವಾಗಿದೆ ಮತ್ತು ಅದನ್ನು ತಡೆಯಲು ಕಾನೂನಿನ ಅಗತ್ಯವಿದೆ. ರಾಜ್ಯದ ಕ್ರಿಶ್ಚಿಯನ್ ಸಮುದಾಯವು ಆತಂಕಕ್ಕೊಳಗಾಗಿದೆ ಮತ್ತು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಯತ್ನಿಸಿದೆ. ಈ ಕುರಿತಾದಂತೆ ನಾವು ಕಾಳಜಿ ವಹಿಸುವ ಅವಶ್ಯಕತೆಯಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ಸುರೇಂದ್ರನ್ ಸುದ್ದಿಗಾರರಿಗೆ ತಿಳಿಸಿದರು.