ಯುವಜನತೆ ಪ್ರಶ್ನಿಸುವುದನ್ನು ಸರ್ಕಾರ ಸಹಿಸುವುದಿಲ್ಲ : ಹೋರಾಟಗಾರ್ತಿ ನವದೀಪ್ ಕೌರ್
ಫೋಟೊ : timesofindia
ಹೊಸದಿಲ್ಲಿ : ಕೇಂದ್ರ ಸರ್ಕಾರ ಯುವಜನತೆಯನ್ನು ಗುರಿ ಮಾಡಿದೆ. ಪ್ರತಿಭಟನೆಗಳ ಮೂಲಕ ಯುವಜನತೆ ಹಿಂಸೆ ಹರಡುತ್ತಿದ್ದಾರೆ ಎಂದು ಹೇಳುತ್ತಿದೆ. ಆದರೆ ಯುವಜನತೆ ಮಾತ್ರ ಸರ್ಕಾರದ ತಪ್ಪುಗಳ ವಿರುದ್ಧ ಹೋರಾಡಬಲ್ಲದು" ಎಂದು ಜೈಲಿನಿಂದ ಬಿಡುಗಡೆಯಾಗಿ ನೇರವಾಗಿ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಯುವ ಹೋರಾಟಗಾರ್ತಿ ನೋದೀಪ್ ಕೌರ್ ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ 24 ಗಂಟೆ ಒಳಗಾಗಿ ಸಿಂಘು ಗಡಿಗೆ ಆಗಮಿಸಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಹೊಸ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಮುಂದುವರಿಯುವುದಾಗಿ ಹಾಗೂ ಸಹ ಪ್ರತಿಭಟನಾಕಾರರಿಗೆ ನ್ಯಾಯ ದೊರಕಿಸಲು ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.
"ನಮ್ಮಂಥವರು ಜನತೆಯ ಹಕ್ಕುಗಳ ಪರವಾಗಿ ನಿಂತು ಹೋರಾಡುವುದು ಅಗತ್ಯ. ಜನ ನಮ್ಮ ಬಗ್ಗೆ ಸಾಕಷ್ಟು ವಿಶ್ವಾಸ ಇರಿಸಿದ್ದಾರೆ" ಎಂದು ಹೇಳಿದರು.
ಜನವರಿ 12ರಂದು ಪೊಲೀಸರು ಬಂಧಿಸಿದ ಘಟನೆ ಬಗ್ಗೆ ಪ್ರಶ್ನಿಸಿದಾಗ, "ಫ್ಯಾಕ್ಟರಿಯೊಂದರ ಎದುರು ಕೆಲ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದಾಗ ಖಾಸಗಿ ಭದ್ರತಾ ಏಜೆನ್ಸಿ ಸಿಬ್ಬಂದಿ ನಮಗೆ ಹೊಡೆದು ಗಾಳಿಯಲ್ಲಿ ಗುಂಡುಹಾರಿಸಿದರು. ಪ್ರತಿಯಾಗಿ ಕಾರ್ಮಿಕರು ಕೂಡಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು. ಪೊಲೀಸರು ಆಗಮಿಸಿದ ಬಳಿಕವೂ ಘರ್ಷಣೆ ಮುಂದುವರಿಯಿತು. ನನ್ನನ್ನು ಪೊಲೀಸರು ಬಂಧಿಸಿದರು" ಎಂದು ವಿವರ ನೀಡಿದರು.