ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ
ಆತ್ಮಹತ್ಯೆ ಪ್ರಕರಣದಲ್ಲಿ ನಂಟಿದೆ ಎಂದು ಬಿಜೆಪಿ ಆರೋಪ
ಫೋಟೊ: ಟ್ವಿಟರ್
ಮುಂಬೈ: ಪುಣೆಯಲ್ಲಿ 23ರ ವಯಸ್ಸಿನ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ವಿಪಕ್ಷ ಬಿಜೆಪಿ ತನ್ನ ಹೆಸರನ್ನು ತಳುಕು ಹಾಕಿದ ಬಳಿಕ ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. “ಕೊಳಕು ರಾಜಕೀಯ’’ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತಿರುವುದಾಗಿ ರಾಥೋಡ್ ಹೇಳಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾದ ಪೂಜಾ ಚವಾಣ್ ತನ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ಪುಣೆಯಲ್ಲಿ ವಾಸವಾಗಿದ್ದರು. ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ನ್ನು ಮಾಡುತ್ತಿದ್ದರು. ಫೆಬ್ರವರಿ 8ರಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪೂಜಾ ಮೃತಪಟ್ಟ ಎರಡು ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಕ್ಲಿಪ್ ವೊಂದು ವೈರಲ್ ಆಗಿದ್ದು, ಇದರಲ್ಲಿ ಇಬ್ಬರು ಪುರುಷರು ಯುವತಿಯ ಸಾವಿನ ಕುರಿತು ಮಾತನಾಡಿದ್ದಾರೆ. ಆಡಿಯೋ ಕ್ಲಿಪ್ ನಲ್ಲಿರುವ ಓರ್ವ ವ್ಯಕ್ತಿ ರಾಥೋಡ್ ಎಂದು ಬಿಜೆಪಿ ಆರೋಪಿಸಿತ್ತು. ರಾಥೋಡ್ ಈ ಆರೋಪವನ್ನು ನಿರಾಕರಿಸಿದ್ದರು.
ಯುವತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರೂ ಕ್ರಿಮಿನಲ್ ಪ್ರಕರಣದಡಿ ತನಿಖೆ ನಡೆಸಲಾಗುತ್ತಿದೆ ಎಂದು ಕಳೆದ ವಾರ ಪೊಲೀಸರು ಹೇಳಿದ್ದರು.
ಯುವತಿಯ ನಿಗೂಢ ಸಾವಿನ ಹಿಂದೆ ರಾಥೋಡ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ರಾಥೋಡ್ ರನ್ನು ಬಂಧಿಸಬೇಕೆಂದು ಆಗ್ರಹಿಸಿತ್ತು.