ಕೇರಳ: ಮಾಜಿ ಹೈಕೋರ್ಟ್ ನ್ಯಾಯಾಧೀಶರಿಬ್ಬರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ
Photo: Barandbench.com
ಕೊಚ್ಚಿ: ಕೇರಳದ ಮಾಜಿ ಹೈಕೋರ್ಟ್ ನ್ಯಾಯಾಧೀಶರಾದ ಪಿ.ಎನ್ ರವೀಂದ್ರನ್ ಮತ್ತು ವಿ ಚಿದಂಬರೇಶ್ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ 18 ಮಂದಿ ರವಿವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೇರಳದ ತ್ರಿಪೂಣಿತ್ತರದಲ್ಲಿ ನಡೆದ ‘ವಿಜಯ ಯಾತ್ರೆ’ ಕಾರ್ಯಕ್ರಮದ ನಿಮಿತ್ತ ನಡೆದ ಸಮಾರಂಭದಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸ್ವಾಗತಿಸಿದರು.
ಚಿದಂಬರೇಶ್ ದೆಹಲಿಯಲ್ಲಿರುವ ಕಾರಣ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ‘ಲವ್ ಜಿಹಾದ್’ ಕಾನೂನಿಗೆ ಬೆಂಬಲ ನೀಡುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ಕುರಿತು ಈ ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಹೆಸರುಗಳು ಇತ್ತೀಚೆಗೆ ಸುದ್ದಿಯಲ್ಲಿತ್ತು. ಪಾಲಕ್ಕಾಡ್ನ ವಿಕ್ಟೋರಿಯಾ ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿ ದಿನಗಳಲ್ಲಿ ಸಕ್ರಿಯ ಎಬಿವಿಪಿ ಕೆಲಸಗಾರನಾಗಿದ್ದೇನೆ ಎಂದು ಚಿದಂಬರೇಶ್ ಹೇಳಿದರು.
ಪಕ್ಷಕ್ಕೆ ಸೇರಿದ ಇತರರಲ್ಲಿ ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿ.ಆರ್ ಮೆನನ್ ಮತ್ತು ಬಿಪಿಸಿಎಲ್ ಮಾಜಿ ಜನರಲ್ ಮ್ಯಾನೇಜರ್ ಸೋಮಚೂಡನ್ ಇದ್ದಾರೆ. ಮಾಜಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಶಿಜಿ ರಾಯ್ ಸೇರಿದಂತೆ ಇತರ 12 ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿಗೆ ಸೇರಿದ್ದಾರೆ ಎಂದು ಬಿಜೆಪಿ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.