ಜಾವೇದ್ ಅಖ್ತರ್ ಮಾನಹಾನಿ ಪ್ರಕರಣ: ಕಂಗನಾ ವಿರುದ್ಧ ವಾರಂಟ್ ಜಾರಿ
ಮುಂಬೈ: ಖ್ಯಾತ ಕವಿ ಹಾಗೂ ಗೀತರಚನೆಕಾರ ಜಾವೇದ್ ಅಖ್ತರ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಇಂದು ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಇಂದು ವಾರಂಟ್ ಜಾರಿಗೊಳಿಸಿದೆ. ಕಂಗನಾಗೆ ಒಂದು ತಿಂಗಳ ಹಿಂದೆಯೇ ಸಮನ್ಸ್ ಜಾರಿಗೊಳಿಸಲಾಗಿತ್ತಾದರೂ ಆಕೆ ವಿಚಾರಣೆಗೆ ಹಾಜರಾಗದೇ ಇರುವುದರಿಂದ ವಾರಂಟ್ ಜಾರಿಯಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟಿವಿ ಮಾಧ್ಯಮಗಳಲ್ಲಿ ಕಂಗನಾ ತಮ್ಮ ವಿರುದ್ಧ ನೀಡಿದ್ದ ಮಾನಹಾನಿಕಾರಕ ಹೇಳಿಕೆಗಳನ್ನು ಪ್ರಶ್ನಿಸಿ ಜಾವೇದ್ ಅಖ್ತರ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮುಂಬೈಯ ಮೆಟ್ರೋಪಾಲಿಟನ್ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಸುಶಾಂತ್ ಸಿಂಗ್ ರಾಜಪುತ್ ಸಾವಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ತನ್ನ ಹೆಸರನ್ನು ಉಲ್ಲೇಖಿಸಿ ಸುಳ್ಳು ಹೇಳಿಕೆಗಳನ್ನು ಕಂಗನಾ ಟಿವಿ ಸಂದರ್ಶನದಲ್ಲಿ ನೀಡಿದ್ದರು ಎಂದು ಅಖ್ತರ್ ಆರೋಪಿಸಿದ್ದರು.
ನ್ಯಾಯಾಲಯದ ಆದೇಶದಂತೆ ಜುಹೂ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಫೆಬ್ರವರಿ 1ರಂದು ನ್ಯಾಯಾಲಯ ಕಂಗನಾಗೆ ಸಮನ್ಸ್ ಜಾರಿ ಮಾಡಿತ್ತು.