ಕೊರೋನ ಲಸಿಕೆಯಿಂದ ಮರಣ ಸಂಭವಿಸಿಲ್ಲ: ಡಾ ಹರ್ಷವರ್ಧನ್
ಹೊಸದಿಲ್ಲಿ, ಮಾ.1: ದೇಶದಲ್ಲಿ ಇದುವರೆಗೆ ಕೊರೋನ ಚುಚ್ಚುಮದ್ದಿನಿಂದ ಯಾವುದೇ ಸಾವಿನ ಪ್ರಕರಣ ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೋಮವಾರ ಹೇಳಿದ್ದಾರೆ.
ಕೊರೋನ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುವ ಅಡ್ಡಪರಿಣಾಮದ ಬಗ್ಗೆ ಸುದ್ಧಿಸಂಸ್ಥೆಯ ಜತೆ ಮಾತನಾಡಿದ ಅವರು, ಬೆವರುವುದು ಅಥವಾ ಜ್ವರ ಹೀಗೆ ಅಲ್ಪಪ್ರಮಾಣದ ಅಡ್ಡಪರಿಣಾಮ ಉಂಟಾಗಬಹುದು. ಸಾಮಾನ್ಯ ಚುಚ್ಚುಮದ್ದು ಪಡೆದಾಗಲೂ ಕೆಲವೊಮ್ಮೆ ಹೀಗೆ ಆಗುತ್ತದೆ. ಕೊರೋನ ಲಸಿಕೆ ಪಡೆದ ಬಳಿಕ ಆಸ್ಪತ್ರೆಗೆ ದಾಖಲಿಸಿದ ಪ್ರಕರಣ ಕೇವಲ 0.0004 ಮಾತ್ರ. ಇದು ನಗಣ್ಯವಾಗಿದೆ. ಕೊರೋನ ಲಸಿಕೆಯಿಂದ ಸಾವು ಸಂಭವಿಸಿಲ್ಲ ಎಂದು ಹೇಳಿದರು.
ಕೊರೋನ ಲಸಿಕೆ ಪಡೆದ 4 ಅಥವಾ 10 ದಿನದ ಬಳಿಕ ಯಾರಾದರೂ ಮೃತಪಟ್ಟರೆ, ಅದನ್ನು ಕೊರೋನ ಲಸಿಕೆಯೊಂದಿಗೆ ಜೋಡಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಾವಿನ ಪ್ರಕರಣವನ್ನೂ ವೈಜ್ಞಾನಿಕವಾಗಿ ತನಿಖೆ ನಡೆಸುವ ಜೊತೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ಪರಿಶೀಲಿಸಿದೆ. ಇದುವರೆಗೆ 1 ಕೋಟಿಗೂ ಅಧಿಕ ಮುಂಚೂಣಿ ಕಾರ್ಯಕರ್ತರು ಹಾಗೂ 20ಕ್ಕೂ ಅಧಿಕ ರಾಷ್ಟ್ರಗಳು ಕೊರೋನ ಲಸಿಕೆ ಬಳಸಿದ್ದಾರೆ. ಲಸಿಕೆಯ ಸುರಕ್ಷತೆಯನ್ನು ಪ್ರಶ್ನಿಸುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಡಾ ಹರ್ಷವರ್ಧನ್ ಹೇಳಿದ್ದಾರೆ.