ರಾಮಮಂದಿರ: ಜಾಗತಿಕ ದೇಣಿಗೆ ಅಭಿಯಾನಕ್ಕೆ ಚಿಂತನೆ
ಲಕ್ನೊ, ಮಾ.1: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ವಿಶ್ವಮಟ್ಟದಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದ ‘ಜಾಗತಿಕ ನಿಧಿ ಸಮರ್ಪಣ ಅಭಿಯಾನ’ ನಡೆಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅಯೋಧ್ಯೆ ರಾಮಮಂದಿರ ಟ್ರಸ್ಟ್ನ ಖಜಾಂಚಿ ಮಹಂತ ಗೋವಿಂದದೇವ್ ಗಿರಿ ಹೇಳಿದ್ದಾರೆ. ದೇಣಿಗೆ ಸಂಗ್ರಹಕ್ಕೆ ಜಾಗತಿಕ ಅಭಿಯಾನ ಆರಂಭಿಸುವಂತೆ ವಿದೇಶದಲ್ಲಿ ನೆಲೆಸಿರುವ ಹಲವು ರಾಮಭಕ್ತರಿಂದ ಕೋರಿಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಶೀಘ್ರವೇ ಟ್ರಸ್ಟಿಗಳು ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಜಾಗತಿಕ ದೇಣಿಗೆ ಅಭಿಯಾನ ಆರಂಭಿಸಲು ಅನುಸರಿಸಬೇಕಿರುವ ಆರ್ಬಿಐ, ವಿತ್ತ ಸಚಿವಾಲಯದ ನಿಯಮ ಮತ್ತು ವಿಧಾನಗಳು, ಆದಾಯ ತೆರಿಗೆ ಕಾನೂನು ಪ್ರಕ್ರಿಯೆ ಕುರಿತು ಸದಸ್ಯರು ಚರ್ಚೆ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.
ವಿದೇಶದಿಂದ ದೇಣಿಗೆ ಸ್ವೀಕರಿಸಲು ಅನುಮತಿ ಕೋರಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಳೆದ ಸೆಪ್ಟಂಬರ್ನಲ್ಲಿ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಶ್ರೀರಾಮ ಮಂದಿರ ನಿರ್ಮಾಣದ ವೆಚ್ಚ 1,500 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಫೆ.27ಕ್ಕೆ ಅಂತ್ಯಗೊಂಡ ರಾಮಮಂದಿರ ದೇಣಿಗೆ ಅಭಿಯಾನದಿಂದ 2,100 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಹೆಚ್ಚುವರಿ ಹಣವನ್ನು ಅಯೋಧ್ಯೆಯ ರಾಮಮಂದಿರ ದೇವಸ್ಥಾನಕ್ಕೆ ಸಂಬಂಧಿಸಿದ, ಇಲ್ಲಿಯ ಸುತ್ತಮುತ್ತಲಿನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಬಳಸಲಾಗುವುದು ಎಂದು ಟ್ರಸ್ಟ್ ಹೇಳಿದೆ. ಈ ಮಧ್ಯೆ, ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣದ ಕಕ್ಷಿಗಾರರಲ್ಲಿ ಒಬ್ಬರಾಗಿದ್ದ ದಿವಂಗತ ಹಾಶಿಂ ಅನ್ಸಾರಿಯ ಪುತ್ರ ಇಕ್ಬಾಲ್ ಅನ್ಸಾರಿಯವರೂ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ‘ ತಂದೆ, ಪತ್ನಿ, ಪುತ್ರ , ಪುತ್ರಿ ಮತ್ತು ನನ್ನ ಹೆಸರಿನಲ್ಲಿ ದೇಣಿಗೆ ನೀಡಿದ್ದೇನೆ. ಆದರೆ ಮೊತ್ತವನ್ನು ತಿಳಿಸುವುದಿಲ್ಲ ’ ಎಂದು ಅನ್ಸಾರಿ ಹೇಳಿದ್ದಾರೆ.