ಕಳೆದ ವರ್ಷ ಪಕ್ಷ ತ್ಯಜಿಸಿ ವಾಪಸಾಗಿದ್ದ ಟಿಎಂಸಿ ಶಾಸಕ ಜಿತೇಂದ್ರ ತಿವಾರಿ ಬಿಜೆಪಿಗೆ ಸೇರ್ಪಡೆ
ಫೋಟೊ: ಟ್ವಿಟರ್
ಕೋಲ್ಕತಾ: ಕಳೆದ ವರ್ಷದ ಡಿಸೆಂಬರ್ ನಲ್ಲಿ ಟಿಎಂಸಿ ಪಕ್ಷವನ್ನು ತ್ಯಜಿಸಿ, ತಕ್ಷಣವೇ ಪಕ್ಷಕ್ಕೆ ವಾಪಸಾಗಿದ್ದ ತೃಣಮೂಲ ಕಾಂಗ್ರೆಸ್ ಶಾಸಕ ಜಿತೇಂದ್ರ ತಿವಾರಿ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದಿಂದ ನಿರ್ಗಮಿಸಿದರು. ಬಿಜೆಪಿಗೆ ಸೇರಿಕೊಂಡರು. ಪಾಂಡವೇಶ್ವರದ ಶಾಸಕ ತಿವಾರಿ ಅಸನೋಲ್ ಜಿಲ್ಲೆಯಲ್ಲಿ ತೃಣಮೂಲದ ಪ್ರಮುಖ ನಾಯಕನಾಗಿದ್ದರು.
ತಿವಾರಿಯವರನ್ನು ಬಿಜೆಪಿಗೆ ಸ್ವಾಗತಿಸಿದ ಬಂಗಾಳ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್,”ಜಿತೇಂದ್ರ ತಿವಾರಿ ಇಂದು ತಮ್ಮ ಪಕ್ಷವನ್ನು ಬದಲಿಸಿದ್ದಾರೆ. ಅವರು ತೃಣಮೂಲ ಪಕ್ಷಕ್ಕಾಗಿ ಕಠಿಣ ಪರಿಶ್ರಮಪಟ್ಟಿದ್ದರು. ಬಂಗಾಳದಲ್ಲಿ ಒಂದು ಬದಲಾವಣೆ ಈಗಾಗಲೇ ಆರಂಭವಾಗಿದೆ. ಇನ್ನೊಂದು ಬದಲಾವಣೆಯು ನಡೆಯಲಿದೆ. ನಮ್ಮೊಂದಿಗೆ ರಾಜೀವ್ ಬ್ಯಾನರ್ಜಿ ಹಾಗೂ ಪ್ರಬೀರ್ ಘೋಷಾಲ್(ಮಾಜಿ ಟಿಎಂಸಿ ನಾಯಕರು)ಇದ್ದಾರೆ’’ ಎಂದರು.
ನಮ್ಮ ಪಕ್ಷ ಪ್ರತಿದಿನ ಬೆಳೆಯುತ್ತಿದೆ. ಬಂಗಾಳದಲ್ಲೂ ನಾವು ಬೆಳೆಯುತ್ತಿದ್ದೇವೆ. ಜಿತೇಂದ್ರ ತಿವಾರಿ ದೊಡ್ಡ ನಾಯಕ. ಆದರೆ, ಅವರು ಸಣ್ಣ ವೇದಿಕೆಯಲ್ಲಿ ನಮ್ಮ ಪಕ್ಷ ಸೇರಿದ್ದಾರೆ'' ಎಂದು ಘೋಷ್ ತಿಳಿಸಿದರು.
''ಜೈ ಶ್ರೀರಾಮ್ ಘೋಷಣೆಯನ್ನು ನಾನು ಚಿಕ್ಕವನಿದ್ದಾಗ ಹೇಳುತ್ತಾ ಬಂದಿರುವೆ. ಇಂದು ನಾನು ಈ ವೇದಿಕೆಯಲ್ಲಿ ಹೇಳುತ್ತಿರುವೆ. ಕಳೆದ 2 ವರ್ಷಗಳಿಂದ ನಾನು ಟಿಎಂಸಿ ಬಗ್ಗೆ ಬೇಸರಗೊಂಡಿದ್ದೆ. ತನ್ನನ್ನು ಸೇರಿಸಿಕೊಂಡಿರುವ ಬಿಜೆಪಿಗೆ ಧನ್ಯವಾದಗಳು'' ಎಂದು ತಿವಾರಿ ಹೇಳಿದರು.