ಸಹಪಾಠಿ ವಿದ್ಯಾರ್ಥಿನಿ ಜತೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ
ಕಣ್ಣೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯ ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿಯ ಮೇಲೆ ಆಟೋ ಚಾಲಕನೊಬ್ಬ ಬರ್ಬರವಾಗಿ ಹಲ್ಲೆ ನಡೆಸಿದ ಘಟನೆ ಕೇರಳದ ಕಣ್ಣೂರು ಸಮೀಪದ ಪಾಣೂರಿನ ಮುತ್ತರಿಪ್ಪೀಡಿಕ ಎಂಬಲ್ಲಿಂದ ವರದಿಯಾಗಿದೆ.
"ನಾನು ಸಹಪಾಠಿಯ ಜತೆಗೆ ಆಕೆಯ ಮನೆಯತ್ತ ನಡೆಯುತ್ತಿದ್ದಾಗ ದಿಢೀರನೇ ಹಲ್ಲೆ ನಡೆಸಲಾಯಿತು. ಕೊನೆಗೆ ತಪ್ಪಾದ ವ್ಯಕ್ತಿಯನ್ನು ಹಿಡಿದಿದ್ದಾಗಿ ಹಾಗೂ ತಪ್ಪಾಯಿತೆಂದು ಅವರು ಹೇಳಿದರು,'' ಎಂದು ಸಂತ್ರಸ್ತ ವಿದ್ಯಾರ್ಥಿ ಹೇಳಿದ್ದಾನೆ.
ಆರೋಪಿಯನ್ನು ಸ್ಥಳೀಯ ಆಟೋ ಚಾಲಕ ಜಿನೇಶ್ ಎಂದು ಗುರುತಿಸಲಾಗಿದ್ದು, ಆತ ಸಿಪಿಐ(ಎಂ) ಸ್ಥಳೀಯ ಸಮಿತಿಯ ಹಾಗೂ ಡಿವೈಎಫೈ ಸದಸ್ಯನೆಂದು ತಿಳಿದು ಬಂದಿದೆ.
ಸೋಮವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇಬ್ಬರು ವಿದ್ಯಾರ್ಥಿಗಳೂ ಹತ್ತನೇ ತರಗತಿಯ ಪೂರ್ವತಯಾರಿ ಪರೀಕ್ಷೆಗೆ ಹಾಜರಾಗಿ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ.
ಘಟನೆ ನಡೆದಾಗ ಯಾರೂ ತನ್ನ ಪುತ್ರನ ಸಹಾಯಕ್ಕೆ ಯಾರೂ ಬಂದಿರಲಿಲ್ಲ, ಈಗ ದೂರು ವಾಪಸ್ ಪಡೆದು ರಾಜಿ ಪಂಚಾತಿಕೆ ನಡೆಸುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂದು ಬಾಲಕನ ತಂದೆ ದೂರಿದ್ದಾರೆ.
ಘಟನೆ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗವೂ ಪ್ರಕರಣ ದಾಖಲಿಸಿದೆ.