"ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುತ್ತೀಯಾ?ʼ ಎಂದು ಆರೋಪಿಯನ್ನು ಪ್ರಶ್ನಿಸಿದ ಸಿಜೆಐ ಬೋಬ್ಡೆ ರಾಜೀನಾಮೆ ನೀಡಲಿ"
3500ಕ್ಕೂ ಅಧಿಕ ಮಂದಿಯಿಂದ ಬಹಿರಂಗ ಪತ್ರ
ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದ ಆರೋಪ ಹೊತ್ತ ವ್ಯಕ್ತಿಯ ಬಳಿ "ಸಂತ್ರಸ್ತೆಯನ್ನು ವಿವಾಹವಾಗುತ್ತೀಯಾ?" ಎಂದು ವಿಚಾರಣೆ ವೇಳೆ ಇತ್ತೀಚೆಗೆ ಕೇಳಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಹಾಗೂ ನ್ಯಾಯಾಲಯದಲ್ಲಿನ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂದು ಕೋರಿ 3,500ಕ್ಕೂ ಅಧಿಕ ನಾಗರಿಕರು, ಮಹಿಳಾ ಹೋರಾಟಗಾರ್ತಿಯರು ಹಾಗೂ ಮಹಿಳಾವಾದಿಗಳು ಸಿಜೆಐ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
"ಭಾರತದಲ್ಲಿ ನ್ಯಾಯ ಪಡೆಯುವುದು ಮಹಿಳೆಯರ ಸಾಂವಿಧಾನಿಕ ಹಕ್ಕಲ್ಲ ಎಂದು ಸಿಜೆಐ ಅವರ ಈ ಹೇಳಿಕೆ ಇತರ ನ್ಯಾಯಾಲಯಗಳು, ನ್ಯಾಯಾಧೀಶರು, ಪೊಲೀಸರು ಹಾಗೂ ಇತರ ಕಾನೂನು ಜಾರಿ ಏಜನ್ಸಿಗಳಿಗೆ ಸಂದೇಶ ಸಾರುತ್ತದೆ, ಇದು ಮಹಿಳೆಯರನ್ನು ಹಾಗೂ ಹುಡುಗಿಯರ ದನಿಯನ್ನು ಮತ್ತಷ್ಟು ಸಂಕುಚಿತಗೊಳಿಸುತ್ತದೆ. ಅತ್ಯಾಚಾರಗೈಯ್ಯಲು ವಿವಾಹ ಒಂದು ಪರವಾನಿಗೆ ಹಾಗೂ ಈ ಪರವಾನಿಗೆ ಪಡೆದು ಆತ ತನ್ನ ಕೃತ್ಯವನ್ನು ಅಪರಾಧವಲ್ಲವೆಂದು ಹೇಳಿಕೊಳ್ಳಬಹುದೆಂಬ ಸಂದೇಶವನ್ನು ಈ ಹೇಳಿಕೆ ಅತ್ಯಾಚಾರಿಗಳಿಗೆ ನೀಡುತ್ತದೆ" ಎಂದು ಪತ್ರ ಕಟು ಶಬ್ದಗಳಲ್ಲಿ ಸಿಜೆಐ ಅವರನ್ನು ಟೀಕಿಸಿದೆ.
ಈ ಪತ್ರಕ್ಕೆ ಸಹಿ ಹಾಕಿದ ಸಂಘಟನೆಗಳ ಪೈಕಿ ಆಲ್ ಇಂಡಿಯಾ ಪ್ರೊಗ್ರೆಸ್ಸಿವ್ ವಿಮೆನ್ಸ್ ಅಸೋಸಿಯೇಶನ್, ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್, ಸಹೇಲಿ ಫೋರಂ ಅಗೇನ್ಸ್ಟ್ ಒಪ್ರೆಶನ್ ಆಫ್ ವಿಮೆನ್ ಕೂಡ ಸೇರಿವೆ