ತಾಜ್ ಮಹಲ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯ ಬಂಧನ
ಶ್ರೀನಗರ, ಮಾ. 3: ತಾಜ್ಮಹಲ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪದಲ್ಲಿ ಉತ್ತರಪ್ರದೇಶ ಪೊಲೀಸರು ಗುರುವಾರ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಮೊಬೈಲ್ ಅನ್ನು ಕೂಡ ಆತನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ. ಆತ ಆಗ್ರಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರ ತುರ್ತು ಕರೆ ದೂರವಾಣಿ ಸಂಖ್ಯೆ 112ಕ್ಕೆ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ, ತಾಜ್ ಮಹಲ್ನ ಒಳಗೆ ಬಾಂಬ್ ಇರಿಸಲಾಗಿದೆ. ಅದು ಯಾವುದೇ ಸಂದರ್ಭದಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಬೆದರಿಕೆ ಒಡ್ಡಿದ್ದ.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ತಾಜ್ಮಹಲ್ನಲ್ಲಿದ್ದ ಪ್ರವಾಸಿಗರನ್ನು ತೆರವುಗೊಳಿಸಿದ್ದರು. ಅಲ್ಲದೆ, ತಾಜ್ಮಹಲ್ಗೆ ಪ್ರವಾಸಿಗರು ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದರು.
ವಿಧ್ವಂಸಕ ಕೃತ್ಯ ನಿಗ್ರಹ ಹಾಗೂ ಸಿಐಎಸ್ಎಫ್ ಕ್ಯೂಆರ್ಟಿ ಕೂಡ ತಾಜ್ಮಹಲ್ಗೆ ಧಾವಿಸಿತ್ತು. ಆದರೆ, ಶೋಧ ಕಾರ್ಯಾಚರಣೆ ಸಂದರ್ಭ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.
ಅನಂತರ ಬೆಳಗ್ಗೆ 11.15ಕ್ಕೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.