ನೇಪಾಳ ಪೊಲೀಸರ ಗುಂಡಿನ ದಾಳಿಗೆ ಭಾರತೀಯ ಬಲಿ: ಉತ್ತರಪ್ರದೇಶ ಪೊಲೀಸ್
ಪಿಲಿಭಿಟ್(ಉತ್ತರಪ್ರದೇಶ): ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಆರೋಪದಲ್ಲಿ ಭಾರತೀಯ ಪ್ರಜೆ ಪೊಲೀಸರ ಗುಂಡಿನ ದಾಳಿಗೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತಪಟ್ಟಿರುವ ವ್ಯಕ್ತಿಯನ್ನು 26ರ ವಯಸ್ಸಿನ ಗೋವಿಂದ ಎಂದು ಗುರುತಿಸಲಾಗಿದೆ. ಗೋವಿಂದ ಅವರು ಪಪ್ಪು ಸಿಂಗ್ ಹಾಗೂ ಗುರ್ಮೀತ್ ಸಿಂಗ್ರೊಂದಿಗೆ ನೇಪಾಳಕ್ಕೆ ತೆರಳಿದ್ದ.
ಭಾರತದ ಮೂವರು ನಾಗರಿಕರು ನೇಪಾಳಕ್ಕೆ ತೆರಳಿದ್ದರು ಎಂಬ ವಿಚಾರವನ್ನು ಎಸ್ ಎಸ್ ಬಿ ಮೂಲಕ ನಮಗೆ ಮಾಹಿತಿ ಲಭಿಸಿತ್ತು. ಕೆಲವು ವಿಚಾರಕ್ಕೆ ಸಂಬಂಧಿಸಿ ಈ ಮೂವರು ಅಲ್ಲಿನ ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದಾರೆ. ನೇಪಾಳ ಪೊಲೀಸರ ಗುಂಡಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನೋರ್ವ ಭಾರತಕ್ಕೆ ವಾಪಸಾಗಲು ಶಕ್ತನಾಗಿದ್ದಾನೆ. ಮೂರನೇ ವ್ಯಕ್ತಿಯನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಭಾರತಕ್ಕೆ ವಾಪಸಾಗಿರುವ ವ್ಯಕ್ತಿಯನ್ನು ಪ್ರಶ್ನಿಸಲು ಯತ್ನಿಸುತ್ತಿದ್ದೇವೆ. ಗಡಿಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇಲ್ಲ ಎಂದು ಪಿಲಿಭಿಟ್ ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ಹೇಳಿದ್ದಾರೆ.