ಹಣ ಅಕ್ರಮ ವರ್ಗಾವಣೆ ಪ್ರಕರಣ: ಮೆಹಬೂಬಾ ಮುಫ್ತಿಗೆ ಈ.ಡಿ ಸಮನ್ಸ್
ಹೊಸದಿಲ್ಲಿ, ಮಾ.5: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ಜಾರಿನಿರ್ದೇಶನಾಲಯ(ಈ.ಡಿ) ಶುಕ್ರವಾರ ಸಮನ್ಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿಯಲ್ಲಿರುವ ಜಾರಿನಿರ್ದೇಶನಾಲಯ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ. ಒಂದು ವರ್ಷಕ್ಕೂ ಅಧಿಕ ಸಮಯ ಗೃಹಬಂಧನಲ್ಲಿದ್ದ ಪಿಡಿಪಿ ಮುಖಂಡೆ ಮೆಹಬೂಬಾ ಮುಫ್ತಿಯನ್ನು ಕಳೆದ ವರ್ಷ ಬಂಧಮುಕ್ತಗೊಳಿಸಲಾಗಿತ್ತು.
ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿ ಹಗರಣಕ್ಕೆ ಸಂಬಂಧಿಸಿ ಕಳೆದ ವರ್ಷ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಗುಪ್ಕರ್ ಮೈತ್ರಿಕೂಟದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರಿಗೆ ಸೇರಿದ 12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ನಿವಾಸ, ಜಮ್ಮುವಿನಲ್ಲಿ ಮತ್ತು ತನ್ಮಾರ್ಗ್ನಲ್ಲಿರುವ ಮನೆಗಳು, ಶ್ರೀನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣ ಸೇರಿದೆ.