ಭಾರತದ ಸಂಪ್ರದಾಯಗಳು ಜಾಗತಿಕ ಮನ್ನಣೆ ಪಡೆಯುವಲ್ಲಿ ʼಜಾತ್ಯತೀತವಾದʼ ಬಹುದೊಡ್ಡ ಅಡ್ಡಿಯಾಗಿದೆ: ಆದಿತ್ಯನಾಥ್
"ಶ್ರೀರಾಮ ತನ್ನ ಸೋದರನ ಪುತ್ರನನ್ನು ಪಾಕಿಸ್ತಾನದ ಆಡಳಿತಗಾರನನ್ನಾಗಿ ನೇಮಕಗೊಳಿಸಿದ್ದ"
ಲಕ್ನೋ,ಮಾ.7: ಭಾರತದ ಸಂಪ್ರದಾಯಗಳು ಜಾಗತಿಕ ಮಾನ್ಯತೆಯನ್ನು ಪಡೆಯುವಲ್ಲಿ ಜಾತ್ಯತೀತವಾದವು ಬಹು ದೊಡ್ಡ ಅಡ್ಡಿಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿ ಹೇಳಿದರು.
ಅಯೋಧ್ಯಾ ಸಂಶೋಧನಾ ಸಂಸ್ಥೆಯು ಸಿದ್ಧಪಡಿಸಿರುವ ಇ-ಬುಕ್ ‘ಗ್ಲೋಬಲ್ ಎನ್ಸೈಕ್ಲೋಪೀಡಿಯಾ ಆಫ್ ರಾಮಾಯಣ ’ದ ಮೊದಲ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ,‘ನಾವು ಇದರಿಂದ ದೂರ ಸರಿದು ಶುದ್ಧ,ನೀತಿಯುತ ಮತ್ತು ಆರೋಗ್ಯಕರ ಬದುಕಿನ ನಿಟ್ಟಿನತ್ತ ಗಮನವನ್ನು ಕೇಂದ್ರೀಕರಿಸಬೇಕು ’ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಈ ಎನ್ಸೈಕ್ಲೋಪೀಡಿಯಾದ ಬಿಡುಗಡೆಗೆ ವಿಶೇಷತೆಯನ್ನು ತಂದಿದೆ ಎಂದರು.
ಭಾರತದ ಗಡಿಗಳನ್ನು ವಿಸ್ತರಿಸಲು ನೆರವಾಗಿದ್ದಕ್ಕಾಗಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಪ್ರಶಂಸಿಸಿದ ಅವರು, 1947ಕ್ಕೆ ಮೊದಲು ಪಾಕಿಸ್ತಾನವು ಭಾರತದ ಭಾಗವಾಗಿತ್ತು ಮತ್ತು ಶ್ರೀರಾಮ ತನ್ನ ಆಡಳಿತಾವಧಿಯಲ್ಲಿ ತನ್ನ ಸೋದರನ ಪುತ್ರನನ್ನು ಪಾಕಿಸ್ತಾನದ ಆಡಳಿತಗಾರನನ್ನಾಗಿ ನೇಮಕಗೊಳಿಸಿದ್ದ ಎಂದು ಆದಿತ್ಯನಾಥ ಹೇಳಿದರು.
ರಾಮಾಯಣದಲ್ಲಿ ಹೇಳಿರುವಂತೆ ಶ್ರೀರಾಮನ ಜೀವನವನ್ನು ಬಿಂಬಿಸುವ ಜಾನಪದ ಪ್ರಕಾರ ‘ರಾಮಲೀಲಾ ’ವನ್ನು ವಿಶ್ವಾದ್ಯಂತ ಪ್ರದರ್ಶಿಸುವ ಅಗತ್ಯವಿದೆ ಎಂದ ಅವರು,ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾದ ಏಳು ಕ್ಷೇತ್ರಗಳಿವೆ. ಈ ಪೈಕಿ ಅಯೋಧ್ಯೆ,ಮಥುರಾ ಮತ್ತು ಕಾಶಿ ಉತ್ತರ ಪ್ರದೇಶದಲ್ಲಿವೆ ಎಂದರು.
ರಾಮನ ಕುರಿತು ಪ್ರಶ್ನೆಗಳನ್ನೆತ್ತುವ ಜನರನ್ನು ಟೀಕಿಸಿದ ಆದಿತ್ಯನಾಥ್,ಈಗಲೂ ಕೆಲವರು ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಿರುತ್ತಾರೆ.ಆದರೆ ಐತಿಹಾಸಿಕ ಸತ್ಯಗಳನ್ನು ನಿರಾಕರಿಸುವಂತಿಲ್ಲ. ರಾಮಾಯಣದಲ್ಲಿ ಹೇಳಿರುವ ಐತಿಹ್ಯಗಳು ಮತ್ತು ಸ್ಥಳಗಳು ಅಸ್ತಿತ್ವದಲ್ಲಿದ್ದವು ಎನ್ನುವುದಕ್ಕೆ ಪುರಾವೆಗಳಿವೆ. ಅಂತಹ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ,ಅವು ಕೇವಲ ಕಲ್ಪನೆಗಳಾಗಿರಲಿಲ್ಲ. ಅಂತಿಮವಾಗಿ ರಾಮ ಲಂಕಾ(ಈಗಿನ ಶ್ರೀಲಂಕಾ)ದಿಂದ ಪುಷ್ಪಕ ವಿಮಾನದಲ್ಲಿ ಮರಳಿದ್ದ. ಆತ ನಡೆದುಕೊಂಡು ಬಂದಿದ್ದರೆ ತಿಂಗಳುಗಳೇ ಬೇಕಾಗುತ್ತಿದ್ದವು ಎಂದರು. ‘ಆ ಯುಗದಲ್ಲಿ ಹಾರಾಡುವ ಯಂತ್ರವು ಅಸ್ತಿತ್ವದಲ್ಲಿತ್ತು ಮತ್ತು ಅಂದಿನ ವಿಜ್ಞಾನದಿಂದ ನಾವು ಬಹಳಷ್ಟನ್ನು ಕಲಿಯಬಹುದು ’ ಎಂದರು.
ಆಗಿನ ಕಾಲದ ತಂತ್ರಜ್ಞಾನವನ್ನು ಪ್ರಶಂಸಿಸಿದ ಆದಿತ್ಯನಾಥ, ಹನುಮಂತ ಅಲ್ಪ ಸಮಯದಲ್ಲಿ ಲಂಕಾವನ್ನು ತಲುಪಿದ್ದರೆ ಹಿಂದೆ ಏನೋ ಇದೆ. ಇಂದು ಶ್ರೀಲಂಕಾಕ್ಕೆ ಪ್ರಯಾಣಿಸಲು ನಾಲ್ಕು ಗಂಟೆಗಳು ಬೇಕಾಗುತ್ತವೆ ಎಂದರು.