ಸಿಂಧಿಯಾ ನಮ್ಮಲಿದ್ದರೆ ಸಿಎಂ ಆಗುತ್ತಿದ್ದರು, ಈಗ ಬಿಜೆಪಿಯ ಲಾಸ್ಟ್ ಬೆಂಚ್ ನಲ್ಲಿದ್ದಾರೆ: ರಾಹುಲ್ ಗಾಂಧಿ ವ್ಯಂಗ್ಯ
"ಆರೆಸ್ಸೆಸ್ ನ ಸಿದ್ಧಾಂತದ ವಿರುದ್ಧ ಹೋರಾಡಿ ಮತ್ತು ಯಾರಿಗೂ ಹೆದರಬೇಡಿ"
ಹೊಸದಿಲ್ಲಿ: ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಜೊತೆಗೆ ಇದ್ದಿದ್ದರೆ ಅವರು ಈಗ ಮುಖ್ಯಮಂತ್ರಿಯಾಗಬಹುದಿತ್ತು ಆದರೆ ಬಿಜೆಪಿಯಲ್ಲಿ ಸದ್ಯ ಲಾಸ್ಟ್ ಬೆಂಚರ್ ಆಗಿ ಮಾರ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್ ಸಂಘಟನೆಯ ಮಹತ್ವದ ಬಗ್ಗೆ ಪಕ್ಷದ ಯುವ ವಿಭಾಗದೊಂದಿಗೆ ಮಾತನಾಡಿದ ಗಾಂಧಿ, "ಅವರು (ಸಿಂಧಿಯಾ) ಕಾಂಗ್ರೆಸ್ ಜೊತೆ ಉಳಿದುಕೊಂಡಿದ್ದರೆ ಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಅವರು ಬಿಜೆಪಿಯೊಂದಿಗೆ ಸೇರಿ ಕೊನೆಯ ಬೆಂಚಿನಲ್ಲಿ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಸಿಂಧಿಯಾ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಲಸ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು ಮಾಡಬಹುದಿತ್ತು. ಒಂದು ದಿನ ನೀವು ಮುಖ್ಯಮಂತ್ರಿಯಾಗುತ್ತೀರಿ ಎಂದು ನಾನು ಅವರಿಗೆ ಹೇಳಿದ್ದೆ. ಆದರೆ ಅವರು ಇನ್ನೊಂದು ಮಾರ್ಗವನ್ನು ಆರಿಸಿಕೊಂಡರು." ಎಂದು ರಾಹುಲ್ ಹೇಳಿದರು.
"ಇದನ್ನು ಬರೆದಿಟ್ಟುಕೊಳ್ಳಿ, ಅವರು ಎಂದಿಗೂ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗುವುದಿಲ್ಲ, ಅದಕ್ಕಾಗಿ ಅವರು ಇಲ್ಲಿಗೆ ಹಿಂತಿರುಗಬೇಕಾಗುತ್ತದೆ" ಎಂದು ಗಾಂಧಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೆಸ್ಸೆಸ್ ನ ಸಿದ್ಧಾಂತದ ವಿರುದ್ಧ ಹೋರಾಡಿ ಮತ್ತು ಯಾರಿಗೂ ಹೆದರಬೇಡಿ ಎಂದು ಅವರು ಯುವ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಳೆದ ಮಾರ್ಚ್ನಲ್ಲಿ ಬಿಜೆಪಿಗೆ ಸೇರಿದ್ದರು.