ರಾಜಕೀಯ ಪಿಚ್ ನಲ್ಲಿ ಅಶೋಕ್ ದಿಂಡ ಬೌಲಿಂಗ್ ಗೆ ಬೌಂಡರಿ ಸಿಡಿಸಲು ಯತ್ನಿಸುತ್ತೇನೆ: ಮನೋಜ್ ತಿವಾರಿ
ತಮ್ಮ ಕ್ರಿಕೆಟ್ ಗೆಳೆಯ ಬಿಜೆಪಿ ಸೇರಿರುವ ಕುರಿತು ತಿವಾರಿ ಹೇಳಿದ್ದೇನು?
ಹೊಸದಿಲ್ಲಿ: ಇತ್ತೀಚೆಗೆ ಟಿಎಂಸಿ ಸೇರಿರುವ ಕ್ರಿಕೆಟಿಗ ಮನೋಜ್ ತಿವಾರಿ, ಬಿಜೆಪಿ ಸೇರಿರುವ ತಮ್ಮ ಸ್ನೇಹಿತ ಅಶೋಕ್ ದಿಂಡ ಕುರಿತು ಪ್ರತಿಕ್ರಿಯಿಸಿ "ಆತ ಬಿಜೆಪಿ ಸೇರಿದ್ದರೂ ನಮ್ಮ ಗೆಳೆತನ ಹಾಗೆಯೇ ಮುಂದುವರಿಯಲಿದೆ ಆದರೆ ರಾಜಕೀಯ ಪಿಚ್ನಲ್ಲಿ ಆತನ ಬೌಲಿಂಗ್ಗೆ ಬೌಂಡರಿಗಳನ್ನು ಸಿಡಿಸಲು ಯಾವತ್ತೂ ಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಪರ 12 ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಆಡಿರುವ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಆಗಿರುವ ತಿವಾರಿ ಅವರು ಹೌರಾದ ಶಿಬ್ಪುರ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ರಾಜಕೀಯದಲ್ಲಿ ದೀರ್ಘ ಇನ್ನಿಂಗ್ಸ್ ಆಡುವ ಗುರಿ ತಮ್ಮದೆಂದು ಹೇಳಿರುವ ಅವರು ರಾಜಕೀಯದಲ್ಲಿ ಯಾವತ್ತೂ ನೇರವಾಗಿ ಬ್ಯಾಟಿಂಗ್ ಮಾಡುವುದಾಗಿ ಹಾಗೂ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಅಶೋಕ್ ದಿಂಡ ಅವರು ಬಿಜೆಪಿಯಿಂದ ಮೊಯಿನ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಬಿಜೆಪಿ ಸೇರಿದ್ದಾರೆಂಬ ಮಾತ್ರಕ್ಕೆ ನಾವು ಸ್ನೇಹಿತರಾಗಿ ಉಳಿಯುವುದಿಲ್ಲ ಎಂಬ ಅರ್ಥವಲ್ಲ ಎಂದು ತಿವಾರಿ ಹೇಳಿದ್ದಾರೆ. "ಹೌದು, ಚುನಾವಣೆ ಮುಗಿಯುವ ತನಕ ನಾವು ಸ್ನೇಹಿತರಾಗಿರುವುದಿಲ್ಲ, ನಾವು ಒಂದೇ ಸಂಕೀರ್ಣದಲ್ಲಿ ವಾಸಿಸುತ್ತಿದ್ದೇವೆ, ನಾವು ಭೇಟಿಯಾದಾಗ ಮಾತನಾಡುತ್ತೇವೆ ಆದರೆ ರಾಜಕೀಯ ಚರ್ಚಿಸುವುದಿಲ್ಲ" ಎಂದು ತಿವಾರಿ ಹೇಳಿದ್ದಾರೆ.