ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ 2019-20ರ ಸಾಲಿನ ಹಣ ಬಿಡುಗಡೆ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: 2019-20ರ ಸಾಲಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ. ಆದರೆ ಕೊರೋನ ಸೋಂಕಿನ ಸಮಸ್ಯೆಯಿಂದಾಗಿ 2020-21 ಮತ್ತು 2021-22ರ ಸಾಲಿನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ನಿಧಿಯನ್ನು ಬಿಡುಗಡೆಗೊಳಿಸಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಶೂನ್ಯವೇಳೆಯಲ್ಲಿ ಟಿಆರ್ಎಸ್ ಸಂಸದ ಬಿ. ಲಿಂಗಯ್ಯ ಯಾದವ್ ಈ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಇದೇ ವಿಷಯದ ಬಗ್ಗೆ ವಿವಿಧ ಪಕ್ಷಗಳ ಸಂಸದರು ಮಾಹಿತಿ ಕೋರಿದ್ದಾರೆ. ಕೊರೋನ ಸೋಂಕಿನ ಸಮಸ್ಯೆ ಆರಂಭವಾಗುವುದಕ್ಕಿಂತ ಮೊದಲಿನ, ಅಂದರೆ 2019-20ರ ಯೋಜನೆಯ ನಿಧಿಯನ್ನು ಸರಕಾರ ಬಿಡುಗಡೆಗೊಳಿಸಿದ್ದು ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ತಮ್ಮ ಕ್ಷೇತ್ರದಲ್ಲಿ ಉದ್ದೇಶಿಸಿದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಬಹುದು. 2019-20ರ ಸಾಲಿನ ಈ ಯೋಜನೆಯ ನಿಧಿಗೆ ವಿತ್ತ ಸಚಿವಾಲಯ ಹಾಗೂ ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆ ಅನುಮೋದನೆ ನೀಡಿದೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಕೊರೋನದಿಂದಾಗಿ 2020-21 ಮತ್ತು 2021-22ರ ಸಾಲಿನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ, ಲೋಕಸಭೆಯ ಸಂಸದರು ತನ್ನ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತೀ ವರ್ಷ 5 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆಸುವ ಅವಕಾಶವಿದ್ದು ತಾನು ಆಯ್ಕೆ ಮಾಡಿದ ಕಾಮಗಾರಿಯ ಬಗ್ಗೆ ಆಯಾ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬಹುದು. ರಾಜ್ಯಸಭೆಯ ಸಂಸದರು ತಾವು ರಾಜ್ಯಸಭೆಗೆ ಆಯ್ಕೆಯಾದ ರಾಜ್ಯದ ಒಂದು ಅಥವಾ ಹೆಚ್ಚು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ಕೆ ಮಾಡಬಹುದು.