ದೀದಿ ನಿಮ್ಮ ಆಟ ಮುಗಿದಿದೆ, ಅಭಿವೃದ್ದಿ ಆರಂಭವಾಗಲಿದೆ: ಪ್ರಧಾನಿ ಮೋದಿ
ಪುರುಲಿಯಾ(ಬಂಗಾಳ): ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಗುರುವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ “ಖೇಲಾ ಹೋಬ್ (ಪಂದ್ಯ ನಡೆಯುತ್ತಿದೆ)ಎಂಬ ಘೋಷಣೆಯನ್ನು ಬಳಸಿಕೊಂಡು ವಾಗ್ದಾಳಿ ನಡೆಸಿದರು. "ದೀದಿ ನೀವು 10 ವರ್ಷಗಳ ಕಾಲ ಆಡಿದ್ದೀರಿ. ಈಗ ನಿಮ್ಮ ಗೇಮ್ ಮುಗಿದಿದೆ. ಅಭಿವೃದ್ದಿ ಕಾರ್ಯ ಆರಂಭವಾಗಲಿದೆ'' ಎಂದರು.
ಮಾ.27ರಿಂದ ಆರಂಭವಾಗಲಿರುವ 8 ಹಂತಗಳ ಚುನಾವಣೆಗೆ ಮೊದಲು ಪುರುಲಿಯಾದಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೀದಿ ಹೇಳುತ್ತಾರೆ ಖೇಲಾ ಹೋಬ್, ಬಿಜೆಪಿ ಉದ್ಯೋಗಗಳ ಬಗ್ಗೆ, ಅಭಿವೃದ್ದಿಯ ಬಗ್ಗೆ, ಪ್ರತಿ ಮನೆಗೂ ಸ್ವಚ್ಚ ನೀರು ಒದಗಿಸುವ ಕುರಿತಾಗಿ ಹೇಳುತ್ತಿದೆ ಎಂದರು.
ದೀದಿ ಹಾಗೂ ಅವರ ಬೆಂಬಲಿಗರು ಮಾವೋವಾದಿಗಳನ್ನು ಪ್ರೋತ್ಸಾಹಿಸುತ್ತಾರೆ ಎಂದು ನಮಗೆ ಗೊತ್ತಿದೆ. ಟಿಎಂಸಿಯ ದಿನಗಣನೆ ಆರಂಭವಾಗಿದೆ. ನೀವು ದೀರ್ಘ ಸಮಯ ಜನರನ್ನು ಮೋಸ ಮಾಡಿದ್ದೀರಿ. ಇದೀಗ ಮಾ ದುರ್ಗಾ ಆಶೀರ್ವಾದದಿಂದ ನಾವು ನಿಮ್ಮನ್ನು ಸೋಲಿಸುತ್ತೇವೆ ಎಂದರು.
ಬಂಗಾಳದಲ್ಲಿ ಕೇಂದ್ರ ಸರಕಾರವು ಡೈರಕ್ಟ್ ಬೆನಿಫಿಟ್ ಟ್ರಾನ್ಸ್ ಫರ್(ಡಿಬಿಟಿ) ಮಾಡುತ್ತಿದೆ. ಆದರೆ ಬಂಗಾಳದಲ್ಲಿ ಅದು ಟಿಎಂಸಿ-ಟ್ರಾನ್ಸ್ ಫರ್ ಮೈ ಕಮಿಷನ್ ಆಗುತ್ತಿದೆ. ಟಎಂಸಿ ಬುಡಕಟ್ಟು ಜನರಿಗೆ ಅನ್ಯಾಯ ಮಾಡಿದೆ. ಬಡ ಜನರಿಗೆ ಕೇಂದ್ರದ ಲಾಭ ಸಿಗದಂತೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.